Wednesday, July 30, 2014

'ಯಾನ'ದ ಯಾನದಲ್ಲಿ

ಪ್ರೀತಿಯ ಭೈರಪ್ಪನವರಿಗೆ,
 ಪುಸ್ತಕವೊಂದು ಬಿಡುಗಡೆಯಾಗುವ ಮೊದಲೇ ತುದಿಗಾಲಲ್ಲಿ ನಿಂತು, ಖರೀದಿಸಿದ ಕೂಡಲೇ ಬಿಸಿ ಬಿಸಿ ಯಾಗಿ ಓದಿ ಅಭಿಪ್ರಾಯ ದಾಖಲಿಸುವ ಪದ್ಧತಿಯೂ, ಹಾಗೆ ಕಾದು ಕೊಳ್ಳುವಂತೆ ಮಾಡುವ ಲೇಖಕರೂ ಕನ್ನಡಕ್ಕೆ ಹೊಸದು. ನನ್ನ ಅಥವಾ ನನ್ನ ಸಮಕಾಲೀನರಿಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳ ದಾಖಲೆ ಮಾರಾಟದ ಕಥೆ ನೋಡಿ, ಕೇಳಿ ಗೊತ್ತಷ್ಟೆ.  ಕನ್ನಡದ ಇನ್ನೂ ಒಂದು ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಏನೆಂದರೆ ಅಧಿಕ ಮಾರಾಟವಾಗುವ ಪುಸ್ತಕಗಳು ಸಾಂಸ್ಕೃತಿಕವಾಗಿ ಮಹತ್ವದಲ್ಲ ಎಂದು. ಇದು ಯಾರು ಹುಟ್ಟು ಹಾಕಿದ್ದು ಹೇಗೆ ಬೆಳೆದು ಬಂತು ಅನ್ನುವುದು ಇಲ್ಲೆ ಅನಗತ್ಯ;
ಈಗಷ್ಟೆ ಮುಗಿಸಿದ ನಿಮ್ಮ ಹೊಸ ಕಾದಂಬರಿ 'ಯಾನ'ದ ಕಥಾ ಪ್ರಪಂಚ ನಿಮ್ಮ ಓದುಗ ವರ್ಗಕ್ಕೆ ಅಪರಿಚಿತವೇನಲ್ಲ. ದಶಕಗಳಿಂದ ನಿಮ್ಮ ಕಾದಂಬರಿಗಳ ಪಾತ್ರ ಪ್ರಪಂಚದಲ್ಲಿ ಮುಳುಗೇಳುತ್ತಿದ್ದ  ನಮಗೆಲ್ಲಾ ಇವರುಗಳು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಎದುರಾಗುವವರೇ;
ಕಥೆಯನ್ನು ಹೇಳುವುದು ಈಗಂತೂ ತೀರಾ ಅನುಚಿತ, ಅದು ಓದಲು ಕಾಯುವವರ ರಸಭಂಗ ಮಾಡುವ, ವಿಕೃತ ಕೆಲಸ. ಆದರೆ ನಿಮ್ಮ ಅಂಚುವಿನ ಅಮೃತಾ, ದೂರ ಸರಿದರು ವಿನ ನಾಯಕಿ, ದಾಟುವಿನ ಸತ್ಯ ಇಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ನಾಯಕಿಯಾಗಿ ಕಾಣುತ್ತಾರೆ, ನಾಯಕ ನು ನಿರಾಕರಣ, ತಂತು, ನೆಲೆ ಯವನೇ ಹಿನ್ನೆಲೆಯ ಕಥಾ ಭಿತ್ತಿ ಮಾತ್ರ ಹೊಸದು. ಅರ್ಥರ್ ಸಿ ಕಾರ್ಕನ ಮಾದರಿಯ ಮೈ ನವಿರೇಳಿಸುವ ವೈಜ್ನಾನಿಕ ಕಥೆಯ ಹುಡುಕಿ ಹೊರಟವರಿಗೆ ಮಾತ್ರ ನಿರಾಶೆ ಕಟ್ಟಿಟ್ಟ ಬುತ್ತಿ. ಎಂದಿನ ಭೈರಪ್ಪರಾಗಿ ಮನುಷ್ಯನ ಅಂತರ್ಮುಖತೆ, ಪ್ರಜ್ನಾ ಪ್ರವಾಹದ ತಂತ್ರ ಬಳಕೆಯಾಗಿದೆ;  ಕಾಲವು ಉಯ್ಯಾಲೆಯಂತೆ ಭೂತದಿಂದ ವರ್ತಮಾನಕ್ಕೂ ಮತ್ತೆ ಭೂತಕ್ಕೂ ತುಯ್ಯುತ್ತದೆ. ಸಂಧಿಗ್ದಗಳು ,ಅಂತರ್ಮಥನಗಳು ಅವೇ ,ರೀತಿ ಬೇರೆ.
ಇವೆಲ್ಲಾ ಮೊದಲ ಓದಿಗೆ ದಕ್ಕಿದವು. ತಾಳ್ಮೆಯಿಂದ ಸವಿಯುತ್ತಾ ಇನ್ನೊಮ್ಮೆ ಓದಿದರೆ ( ಅಲ್ಲಿ ಆತುರವಿಲ್ಲ, ನಾಲಿಗೆಯಲ್ಲಿ ಕರಗಿದ ಚಾಕಲೇಟ್ ಉಲಿಸಿಹೋದ ಸ್ವಾದದ ಸಿಹಿ ನೆನಪು)_ ಬಹುಶ ಇನ್ನಷ್ಟು ದಕ್ಕಬಹುದು.
ಆದರೂ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದರೂ ಕವಲು ವಿನಲ್ಲಿ ಹ್ಯಾಪ್ಪಿ ಎಂಡಿಂಗ್ ಮತ್ತು ಮಹಿಳೆಯರನ್ನ ತೀರಾ ಕೆಟ್ಟದಾಗಿ ಚಿತ್ರಿಸಿದ್ದು ಸರಿ ಕಂಡಿರಲಿಲ್ಲ, ನಿಮ್ಮ ಇತ್ತೀಚಿನ ಕೃತಿಗಳಲ್ಲಿ ನೀವು ಪುರುಷ ಪಕ್ಷಪಾತಿಯೋ ಎಂಬ ಅನುಮಾನ ,ಗೊಂದಲಗಳು ಕಾಡುತ್ತವೆ. ಇವೆಲ್ಲಾ ಚಿಲ್ಲರೆ ಸಂಗತಿಗಳು. ಒಂದೊಳ್ಳೆಯ ಪುಸ್ತಕ ಓದಿದ ಮೇಲೂ ಕಾಡುತ್ತದೆ. ಆ ಅನುಭವಕ್ಕಂತೂ ಮೋಸವಿಲ್ಲ. ನಮಸ್ಕಾರ.

Saturday, July 26, 2014

ಬರೆಯಲಾರದ ಕಷ್ಟ

ಬಸ್ಸಲ್ಲಿ  ಹೀಗೆ ಕಿಟಕಿಗೆ ತಲೆಯಾನಿಸಿಕೊಂಡು ಹೊರಗೆ ನೋಡುತ್ತಾ ನಿದ್ದೆಗೆ ಜಾರುವಾಗ ಎಂದೂ ಬರೆಯಲಾಗದ ಕತೆಯ ಸಾಲುಗಳು ಒತ್ತರಿಸಿ ಬರುತ್ತವೆ. ಅದನ್ನೇ ಟೈಪಿಸಲೋ ಬರೆಯಲೋ ಹೊರಟರೆ ದಿಕ್ಕಾಪಾಲಾಗಿ ಓಡುತ್ತವೆ. ಬಹುಶಃ ಅದು ಬೇಡುವ ಅನುಭವದ ದ್ರವ್ಯಕ್ಕೂ, ತಾಳ್ಮೆಗೂ ನಾನಿನ್ನೂ ಬಲಿತಿಲ್ಲ ಅಂತ ಸುಳ್ಳೇ ಸಮಾಧಾನ!
ನೆನಪು ಹಿಂಜಿ ಹತ್ತಿಯಂತೆ ತೆಳುವಾದರೂ ಮತ್ತೆ ಮತ್ತೆ ಅದೇ ಓಣಿಗಳಲ್ಲಿ ನುಗ್ಗುವ ಮನಸಿನ ಧಾವಂತದ ಅರ್ಥವೇನು ಅಂತ ಗೊತ್ತಿಲ್ಲ. ' ನಾನು ಚಿಕ್ಕೋನಿದ್ದಾಗ ' ಅಂತ ಶುರುವಾಗುವ ಎಲ್ಲ ಕತೆಗಳೂ ಮತ್ತದೇ ಕ್ಲೀಷೆಯಾಗಿ ಹೇಳುವವನಿಗೇ ಬೇಸರವಾಗಿಬಿಡುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು 'ಕಂಫರ್ಟ್ ಝೋನ್' ಬಿಟ್ಟು ಬರುವ, ಉದಾಸೀನದ ಮೂಟೆಯ ಇಳಿಸುವ ಅನಿವಾರ್ಯತೆ ಇರುವ ಕಾರಣ ಅದು ರಿಸ್ಕ್.
ಹೀಗೆ ಯಾವತ್ತಾದರು ಲಹರಿಯ ಗುಂಗಲ್ಲಿ ಬಂದಷ್ಟು  ಬರೆದರೆ ಬರೆಯಲು ಸುಲಭದಲ್ಲಿ ಸಿಕ್ಕಿದರೇ ಅದೇ ಪುಣ್ಯ, ನಡು ನಡುವೆ ಈಗಿನ ಗೀಚುವಿಕೆ ಮುಂದೆಂದೋ ಯಾಕಪ್ಪಾ ಬರೆದೆ ಎಂಬ ಹಳಹಳಕೆಯಾಗಬಾರದು ಅಂತಲೇ ಡಿಲೀಟಾಗಿ ಹೋಗುತ್ತೆ.
ಒಂದಿಷ್ಟು ಹಾರ್ಮೋನುಗಳ ಆಟಾಟೋಪಕ್ಕೆ ಏನೆಲ್ಲ ಸಹಿಸಬೇಕು ಅಂದರೇ ದಿಗಿಲಾಗುತ್ತೆ!

Wednesday, July 16, 2014

ಅನುವಾದಗಳ ಕತೆ!

ನಮ್ಮ ಕನ್ನಡ ಸಾಹಿತ್ಯದ ದುರಂತ ಎಂದರೆ ಹೊಸತಕ್ಕೆ ತೆರೆದುಕೊಳ್ಳದಿರುವುದು ಮತ್ತು ಮಾಹಿತಿಯ ಕೊರತೆ. ಇಡೀ ಜಗತ್ತೇ ಬರಿದೆ ಪುಸ್ತಕಗಳ ಬಿಟ್ಟು ಕಡಿಮೆ ಅವಧಿಯಲ್ಲಿ ತಲುಪುವ, ಕಡಿಮೆ ಜಾಗ ಹೊಂದುವ ಇ ಬುಕ್ ಗಳಿಗೆ ಬದಲಾಗುತ್ತಿರುವ ಗಳಿಗೆಯಲ್ಲಿ ನಾವು ಇನ್ನೂ ಅಪ್ ಡೇಟ್ ಆಗೇ ಇಲ್ಲ. ಸರಿಯಾಗಿ ಹುಡುಕಿದರೆ ಕೆಲವು ನೂರು ಕನ್ನಡ ಪುಸ್ತಕಗಳು ಸಿಗಬಹುದು ಅಷ್ಟೇ! ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯದಲ್ಲಿ ಹುಡುಕಿದರೆ ಅದೇ ಸಹ್ರಸನಾಮಾವಳಿಗಳು ಇತ್ಯಾದಿಗಳ ಸಾಲೇ ಇವೆ. ಅವೂ ಹಳೆಯ ಓಬೀರಾಯನ ಕಾಲದವು! ವಸುಧೇಂದ್ರರ ಎರಡೋ ಮೂರೋ ಪುಸ್ತಕ ಬಂದದ್ದು ಬಿಟ್ಟರೆ ಮತ್ತೆಲ್ಲ ಹವ್ಯಾಸಿಗಳ ಪ್ರಯತ್ನವೇ!
ಇನ್ನು , ಮಾಹಿತಿಯ ಬಗ್ಗೆ ನಮಗೆ ಜಗತ್ತಿನ ಅದ್ಭುತ ಕೃತಿಗಳನ್ನೆಲ್ಲ ಅವವೇ ಭಾಷೆಯಲ್ಲಿ ಓದುವುದು ಕಷ್ಟವೇ; ಹಾಗಂತ ಕನ್ನಡ ಅನುವಾದಗಳ ಮಾಹಿತಿಯೂ ಇರುವುದಿಲ್ಲ, (ಹೊಸತು ಅಂತ ಒಂದು ಪೇಪರ್ ಬರುತ್ತೆ ಆದರೆ ಅದರ ವಿಸ್ತಾರ ಅಷ್ಟಾಗಿಲ್ಲ) ನನಗೀಗಲೂ
ನೆನಪಿದೆ. ಕೆಲ ವರ್ಷಗಳ ಹಿಂದೆ ಯಾವುದೋ ಪುಸ್ತಕ ಪ್ರದರ್ಶನದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದವನಿಗೆ ಅಕಸ್ಮಾತ್ ಎಂಬಂತೆ ಪ್ರಸನ್ನ ಅವರ ಮಾರ್ಕ್ವೇಝ್ ಕಾದಂಬರಿ ವನ್ ಹಂಡ್ರೆಡ್ ಇಯರ್ಸ್ ಆಫ಼್ ಸಾಲಿಟ್ಯೂಡ್ ನ ಅನುವಾದ ಒಂದು ನೂರು ವರ್ಷಗಳ ಏಕಾಂತ ಕಣ್ಣಿಗೆ ಬಿದ್ದು ಆದ ಖುಷಿ(ಅದನ್ನ ಇಂಗ್ಲೀಷಲ್ಲಿ ಓದಿ ಆಗ ನಾನ್ಯಾಕೆ ಖುಷಿ ಪಟ್ಟೆ ಅಂತ ಅರ್ಥ ಆಗುತ್ತೆ) .ಹಾಗೆ ಪ್ರೈಡ್ ಯಂಡ್ ಪ್ರಿಜ್ಯುಡೀಸ್ ದೇಜಗೌ ಅವರು ಹಮ್ಮು ಬಿಮ್ಮು ಅಂತ, ಕ್ರಾನಿಕಲ್ಸ್ ಆಫ಼್ ಎ ಡೆತ್ ಫ಼ೋರ್ ಟೋಲ್ಡ್ ಎಲ್.ಎಸ್. ಶೇಷಗಿರಿರಾಯರು ಒಂದು ಸಾವಿನ ವೃತ್ತಾಂತ ಅಂತ, ಲವ್ ಇನ್ ದ ಟೈಮ್ ಆಫ಼್ ಕಾಲರಾ ವನ್ನ ರವಿ ಬೆಳಗೆರೆ ಮಾಂಡೋವಿ ಅಂತ, ಓ.ಎಲ್.ನಾಗಭೂಷಣ ಸ್ವಾಮಿಯವರು ವಾರ್ ಯಾಂಡ್ ಪೀಸ್ ಅನ್ನು ಯುದ್ಧ ಮತ್ತು ಶಾಂತಿ ಅಂತ, ಥೆ ಗಾಡ್ ಫ಼ಾದರ್ ಅನ್ನು ಎಮ್.ವಿ.ನಾಗರಾಜ ರಾವ್ ಮತ್ತು ರವಿ ಬೆಳಗೆರೆ ಅದೇ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ ಅಂತ, ಗಾನ್ ವಿತ್ ದ ವಿಂಡ್, ಗುಡ್ ಅರ್ತ್ ,ಓಲ್ಡ್ ಮ್ಯಾನ್ ಯಾಂಡ್ ಸೀ,ಅನ್ನಾ ಕರೇನಿನಾ ದ ಟ್ರಯಲ್, ಮೆಟಾಮೊರ್ಫ಼ೋಸಿಸ್  ಹೀಗೆ ಜಗತ್ತಿನ ಅತ್ಯುತ್ತಮ ಕೃತಿಗಳೆಲ್ಲಾ ಈಗಾಗಲೇ ಕನ್ನಡಕ್ಕೆ ಬಂದಿವೆ. ಕೆಲವು ಮೂಲವನ್ನ ಮೀರಿಸಿವೆ.ಕೆಲವು ಹಳಿ ತಪ್ಪಿವೆ. ಆದರೆ ಸವಿಯ ಸವಿಯಲು ಇಷ್ಟು ಸಾಕಲ್ಲ!
ನಿನ್ನೆ ಹೀಗೇ ಜ್ಯೋತಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ತಡಕಾಡುತ್ತಿದ್ದಾಗ, ಹಠಾತ್ತಾಗಿ ಫ಼್ರೆಡ್ ರಿಕ್ ಫ಼ೋರಿಸ್ಯ್ತ್ ನ ಡೆ ಆಫ಼್ ಜಾಕಲ್ ನ ಕನ್ನಡ ಅನುವಾದ 'ಅವನದೇ ಆ ದಿನ' ಕಣ್ಣಿಗೆ ಬಿದ್ದು ಹೀಗೆಲ್ಲಾ ಅನಿಸಿತು!