Saturday, January 3, 2015

'ಸುಮ್ಮನೆ' ಓದಿದ ಗುಂಗು

ಬಿ.ಸಿ.ರೋಡಲ್ಲಿ ಓದುತ್ತಿದ್ದಾಗ ಹಳೆಯ 'ತರಂಗ' ಸಂಚಿಕೆಗಳ ತಿರುವಿ ಹಾಕುತ್ತಿದ್ದಾಗ ಅನಿರೀಕ್ಷಿತ ಎಂಬಂತೆ ಕಣ್ಣಿಗೆ ಬಿದ್ದದ್ದೇ ಈ ' ಅಶ್ವಘೋಷ' ಅನ್ನುವ ಹೆಸರು. ಬರೆದವರಾರು ನೋಡಿದರೆ 'ಸತ್ಯಕಾಮ' ಎಂದಿತ್ತು. ಎರಡೂ ವಿಚಿತ್ರವಾಗಿದೆಯಲ್ಲ ಅಂದುಕೊಳ್ಳುತ್ತಾ ಆ ಧಾರಾವಾಹಿಯ ಮೊದಲ ಭಾಗ ಓದುವಾಗಲೇ ತಲೆ ಗಿರ್ರೆಂದಿತ್ತು. ಅದರಲ್ಲಿದ್ದ ಗಂಜೀಫ಼ಾ ರಘುಪತಿ ಭಟ್ಟರ ಕಲೆ ಹೊಸತೆನ್ನಿಸಿತ್ತು. ಬಿಡಿ ಬಿಡಿ ವಾಕ್ಯಗಳು ನನಗೆ ಹೊರೆಯಾಗಿತ್ತು. ಆಗ ಸಿಕ್ಕಿದ್ದೆಲ್ಲ ಓದುತ್ತಿದ್ದ ಕಾರಣ ಪಟ್ಟಾಗಿ ಕೂತು ಓದಿ ಮುಗಿಸಿದರೂ , ಎಲ್ಲೋ ಇದು ಈ ತನಕ ಓದಿದ್ದಕ್ಕಿಂತ ಭಿನ್ನವಾಗಿದೆ ಎಂಬ ಭಾವ.
ಆಮೇಲೆ ಹೈಸ್ಕೂಲಿನ ದಿನಗಳಲ್ಲಿ ಸತ್ಯಕಾಮರ ನಾಯಿ ಮೂಗು, ರಾಜ ಕ್ರೀಡೆ, ಶೃಂಗಾರ ತೀರ್ಥ ಹೀಗೆ ಹಲವಾರು ಪುಸ್ತಕ ಓದಿದೆ. ಬಿಟ್ಟ ಸ್ಥಳಗಳ ತುಂಬಿರಿ ತರಹದ ಅವರ ಬರಹ ಮನಸಿಗೆ ಭಾರವಾಗಿತ್ತು. ಓದಿದರೆ ಏನೋ ಅತೃಪ್ತಿ: (ಎಮ್.ವ್ಯಾಸರ ಓದಿದರೂ ಹಾಗೇ, ಖಾಲಿಯಾಗುವ ಭಯ) ಉಲ್ಲಾಸವಿಲ್ಲ.
ಮತ್ತೆ ಸಿಕ್ಕಿದ್ದು ಅವರ 'ತಂತ್ರಯೋನಿ' ಪಂಚ'ಮ''ಗಳ ನಡುವೆ' ಇವೆರಡು,ಜೊತೆಗೆ ಸುರೇಶ ಸೋಮಪುರರ 'ಅಘೋರಿಗಳ ನಡುವೆ' ಹೊಸ ಜಗತ್ತಿಗೆ ಕಿಂಡಿಯಾಗಿತ್ತು. ಆದರೂ ನನಗೆ ಅಷ್ಟಾಗಿ ಖುಶಿ ಕೊಡದ ಲೇಖಕ ಸತ್ಯಕಾಮ.
ಇತ್ತೀಗಷ್ಟೇ ಅವರ ನೆನಪಿನ ಗ್ರಂಥ 'ಸುಮ್ಮನೆ' ಓದಿದೆ. ವೀಣಾ ಬನ್ನಂಜೆ ಸಂಪಾದಿಸಿರುವ ಇದನ್ನು ಅಭಿನವ ಪ್ರಕಟಿಸಿದೆ. ಒಳ್ಳೆಯ ಸಂಕಲನ. ಸತ್ಯಕಾಮವರ ಬಲ್ಲವರು, ಹಾಗೆಂದು ಭ್ರಮಿಸಿಕೊಂಡವರು ಬರೆದ ಅವರ ಚಿತ್ರಣಗಳ ಸಂಕಲನ. ಕೆಲವರಿಗೆ ಅವರು ಧೂರ್ತ(ಲಂಕೇಶ್..) ಮತ್ತೆ ಕೆಲವರಿಗೆ ಅವಧೂತ..ಹೀಗೆ.
ಇದೊಂತರಾ ಅವರಿವರು ದಯಮಾಡಿದ ತಮ್ಮ ತಮ್ಮ ನೆನಪಿನ ಆಲ್ಬಮ್ ನಿಂದ , ನಾವು ಇಡಿಯ ಚಿತ್ರ ರೂಪಿಸುವ ಯತ್ನ.ಖಾಲಿ ಬಿಟ್ಟದ್ದು ಹಾಗಿದ್ದರೇ  ಚೆಂದ ಮತ್ತು ಪರಿಪೂರ್ಣ!

No comments:

Post a Comment