Wednesday, July 16, 2014

ಅನುವಾದಗಳ ಕತೆ!

ನಮ್ಮ ಕನ್ನಡ ಸಾಹಿತ್ಯದ ದುರಂತ ಎಂದರೆ ಹೊಸತಕ್ಕೆ ತೆರೆದುಕೊಳ್ಳದಿರುವುದು ಮತ್ತು ಮಾಹಿತಿಯ ಕೊರತೆ. ಇಡೀ ಜಗತ್ತೇ ಬರಿದೆ ಪುಸ್ತಕಗಳ ಬಿಟ್ಟು ಕಡಿಮೆ ಅವಧಿಯಲ್ಲಿ ತಲುಪುವ, ಕಡಿಮೆ ಜಾಗ ಹೊಂದುವ ಇ ಬುಕ್ ಗಳಿಗೆ ಬದಲಾಗುತ್ತಿರುವ ಗಳಿಗೆಯಲ್ಲಿ ನಾವು ಇನ್ನೂ ಅಪ್ ಡೇಟ್ ಆಗೇ ಇಲ್ಲ. ಸರಿಯಾಗಿ ಹುಡುಕಿದರೆ ಕೆಲವು ನೂರು ಕನ್ನಡ ಪುಸ್ತಕಗಳು ಸಿಗಬಹುದು ಅಷ್ಟೇ! ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯದಲ್ಲಿ ಹುಡುಕಿದರೆ ಅದೇ ಸಹ್ರಸನಾಮಾವಳಿಗಳು ಇತ್ಯಾದಿಗಳ ಸಾಲೇ ಇವೆ. ಅವೂ ಹಳೆಯ ಓಬೀರಾಯನ ಕಾಲದವು! ವಸುಧೇಂದ್ರರ ಎರಡೋ ಮೂರೋ ಪುಸ್ತಕ ಬಂದದ್ದು ಬಿಟ್ಟರೆ ಮತ್ತೆಲ್ಲ ಹವ್ಯಾಸಿಗಳ ಪ್ರಯತ್ನವೇ!
ಇನ್ನು , ಮಾಹಿತಿಯ ಬಗ್ಗೆ ನಮಗೆ ಜಗತ್ತಿನ ಅದ್ಭುತ ಕೃತಿಗಳನ್ನೆಲ್ಲ ಅವವೇ ಭಾಷೆಯಲ್ಲಿ ಓದುವುದು ಕಷ್ಟವೇ; ಹಾಗಂತ ಕನ್ನಡ ಅನುವಾದಗಳ ಮಾಹಿತಿಯೂ ಇರುವುದಿಲ್ಲ, (ಹೊಸತು ಅಂತ ಒಂದು ಪೇಪರ್ ಬರುತ್ತೆ ಆದರೆ ಅದರ ವಿಸ್ತಾರ ಅಷ್ಟಾಗಿಲ್ಲ) ನನಗೀಗಲೂ
ನೆನಪಿದೆ. ಕೆಲ ವರ್ಷಗಳ ಹಿಂದೆ ಯಾವುದೋ ಪುಸ್ತಕ ಪ್ರದರ್ಶನದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದವನಿಗೆ ಅಕಸ್ಮಾತ್ ಎಂಬಂತೆ ಪ್ರಸನ್ನ ಅವರ ಮಾರ್ಕ್ವೇಝ್ ಕಾದಂಬರಿ ವನ್ ಹಂಡ್ರೆಡ್ ಇಯರ್ಸ್ ಆಫ಼್ ಸಾಲಿಟ್ಯೂಡ್ ನ ಅನುವಾದ ಒಂದು ನೂರು ವರ್ಷಗಳ ಏಕಾಂತ ಕಣ್ಣಿಗೆ ಬಿದ್ದು ಆದ ಖುಷಿ(ಅದನ್ನ ಇಂಗ್ಲೀಷಲ್ಲಿ ಓದಿ ಆಗ ನಾನ್ಯಾಕೆ ಖುಷಿ ಪಟ್ಟೆ ಅಂತ ಅರ್ಥ ಆಗುತ್ತೆ) .ಹಾಗೆ ಪ್ರೈಡ್ ಯಂಡ್ ಪ್ರಿಜ್ಯುಡೀಸ್ ದೇಜಗೌ ಅವರು ಹಮ್ಮು ಬಿಮ್ಮು ಅಂತ, ಕ್ರಾನಿಕಲ್ಸ್ ಆಫ಼್ ಎ ಡೆತ್ ಫ಼ೋರ್ ಟೋಲ್ಡ್ ಎಲ್.ಎಸ್. ಶೇಷಗಿರಿರಾಯರು ಒಂದು ಸಾವಿನ ವೃತ್ತಾಂತ ಅಂತ, ಲವ್ ಇನ್ ದ ಟೈಮ್ ಆಫ಼್ ಕಾಲರಾ ವನ್ನ ರವಿ ಬೆಳಗೆರೆ ಮಾಂಡೋವಿ ಅಂತ, ಓ.ಎಲ್.ನಾಗಭೂಷಣ ಸ್ವಾಮಿಯವರು ವಾರ್ ಯಾಂಡ್ ಪೀಸ್ ಅನ್ನು ಯುದ್ಧ ಮತ್ತು ಶಾಂತಿ ಅಂತ, ಥೆ ಗಾಡ್ ಫ಼ಾದರ್ ಅನ್ನು ಎಮ್.ವಿ.ನಾಗರಾಜ ರಾವ್ ಮತ್ತು ರವಿ ಬೆಳಗೆರೆ ಅದೇ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ ಅಂತ, ಗಾನ್ ವಿತ್ ದ ವಿಂಡ್, ಗುಡ್ ಅರ್ತ್ ,ಓಲ್ಡ್ ಮ್ಯಾನ್ ಯಾಂಡ್ ಸೀ,ಅನ್ನಾ ಕರೇನಿನಾ ದ ಟ್ರಯಲ್, ಮೆಟಾಮೊರ್ಫ಼ೋಸಿಸ್  ಹೀಗೆ ಜಗತ್ತಿನ ಅತ್ಯುತ್ತಮ ಕೃತಿಗಳೆಲ್ಲಾ ಈಗಾಗಲೇ ಕನ್ನಡಕ್ಕೆ ಬಂದಿವೆ. ಕೆಲವು ಮೂಲವನ್ನ ಮೀರಿಸಿವೆ.ಕೆಲವು ಹಳಿ ತಪ್ಪಿವೆ. ಆದರೆ ಸವಿಯ ಸವಿಯಲು ಇಷ್ಟು ಸಾಕಲ್ಲ!
ನಿನ್ನೆ ಹೀಗೇ ಜ್ಯೋತಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ತಡಕಾಡುತ್ತಿದ್ದಾಗ, ಹಠಾತ್ತಾಗಿ ಫ಼್ರೆಡ್ ರಿಕ್ ಫ಼ೋರಿಸ್ಯ್ತ್ ನ ಡೆ ಆಫ಼್ ಜಾಕಲ್ ನ ಕನ್ನಡ ಅನುವಾದ 'ಅವನದೇ ಆ ದಿನ' ಕಣ್ಣಿಗೆ ಬಿದ್ದು ಹೀಗೆಲ್ಲಾ ಅನಿಸಿತು!

No comments:

Post a Comment