Friday, November 18, 2011

ನನ್ನ ದಾರಿಯ ಕನಸುಗಳು

ನನಗಂತೂ ಪ್ರಯಾಣ ಅಂದರೆ ಇಷ್ಟ; ಅದರಲ್ಲೂ ಬಸ್ಸಲ್ಲಿ. ಸುಮ್ಮನೆ ಕಿಟಕಿಯ ಸರಳಿಗೆ ಮುಖ ಅಂಟಿಸಿಕೊಂಡು ಹೊರಗೆ ನೋಡುತ್ತಾ, ಮಿಂಚಿ ಮರೆಯಾಗುವ ಜನರ ಮುಖಭಾವ ಅಳೆಯುತ್ತಾ, ನನ್ನೊಳಗೆ ಕನಸುತ್ತಾ ಹೋಗುವುದೂ ಅಂದರೆ ಸ್ವರ್ಗ! ಅದೆಲ್ಲಾ ಬೋರಾಯಿತು ಅಂದರೆ ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿಕೊಂಡು ಆರಾಮಾಗಿ ಸೀಟಿಗೆ ಬೆನ್ನು ಚಾಚಿ ನಿದ್ದೆ; ಆಮೇಲೆ ಕಂಡಕ್ಟರ್ ಕೊನೆಯ ಸ್ಟಾಪ್ ನಲ್ಲಿ ತಟ್ಟಿ ಎಬ್ಬಿಸಿದರೇ ಈ ಲೋಕಕ್ಕೆ! ಇದಕ್ಕೆಲ್ಲ ಬ್ರೇಕ್ ಬಿದ್ದದ್ದು ಬೈಕ್ ಬಂದ ಮೇಲೇ; ಒಂದು ನನಗೆ ಸರಿಯಾಗಿ ಓಡಿಸಲು ಬರುತ್ತಿರಲಿಲ್ಲ ಅಂತ, ಇನ್ನೊಂದು ಅದರಲ್ಲಿ ಒಂದು ಅರ್ಧ ಗಂಟೆಯೋ ಒಂದು ಗಂಟೆಯೋ ಬೇಗ ತಲುಪಿ ಮಾಡುವುದಾದರೂ ಏನು? ನನ್ನ ಖಾಸಗಿ ಸಂತೋಷ ಕೊನೆಯಾಗುತ್ತಲ್ಲಾ ಅಂತ, ಆದರೆ ಹಾಗಾಗಲಿಲ್ಲ.
ಡ್ಯೂಟಿಲಿ ನನ್ನ ಅಪ್ ಸ್ಟ್ರೀಮ್, ಡೌನ್ ಸ್ಟ್ರೀಮ್ ಇರುವ ಪುಣ್ಯಾತ್ಮರು ಅಡ್ಜಸ್ಟ್ ಮಾಡಿಕೊಂಡು ಚೇಂಜ್ ಕೊಟ್ಟರೆ, ಆಫ಼್ ನ ಹಿಂದಿನ ದಿನವೇ ಮಧ್ಯಾಹ್ನವೇ ಮನೆ ಕಡೆ ಓಟ. ಆ ಕೆಟ್ಟ ಬಿಸಿಲಿಗೆ ಕಾದು ಹಪ್ಪಳದಂತಾಗಿ, ಒಂದೂವರೆ ಲೀಟರ್ ಬೆವರಲ್ಲಿ ತೊಯ್ದ ಅಂಗಿ ಬೆನ್ನಿಗಂಟಿಕೊಂಡು ಕಿರಿಕಿರಿ ಹುಟ್ಟಿಸಿ ಯಾವಾಗ ಮನೆ ಮುಟ್ಟುವೆನೋ ಅನಿಸುತ್ತಿತ್ತು. ಕಂಪೆನಿಯಿಂದ ಮನೆಗೆ ಸರಿಸುಮಾರು ೭೫ ಕಿ.ಮೀ.ಗಳು. ಮಧ್ಯಾಹ್ನದ ಉರಿಬಿಸಿಲಲ್ಲಿ ಸುರತ್ಕಲ್ ಟು ಮಂಗಳೂರು ಟು ಬಿ.ಸಿ.ರೋಡ್ ಟು ವಿಟ್ಲ ಟು ಕನ್ಯಾನ ದಾರಿ, ಕ್ಷಣ ಕ್ಷಣಕ್ಕೂ ಅಸಹನೆ; ಹಾಗೂ ಹೀಗೂ ಮನೆ ತಲುಪಿ ಉಸ್ಸಪ್ಪಾ ಅಂದರೆ ಮುಗಿಯಿತು.
ಆದರೆ ಆ ಪುಣ್ಯಾತ್ಮರು ಚೇಂಜ್ ಕೊಡದಿದ್ದರೆ ನನ್ನ ನಾರ್ಮಲ್ ’ಬಿ’ ಶಿಫ಼್ಟ್ ಮುಗಿಸಿ ಮರುದಿನ ಬೆಳಿಗ್ಗೆ ಐದೂವರೆಗೆ ಹೊರಡುವ ಸಂಭ್ರಮ! ಚುಮು ಚುಮು ಚಳಿಯಲ್ಲಿ, ಅಲ್ಪ ಸ್ವಲ್ಪ ಕತ್ತಲಿನಲ್ಲಿ, ದಾರಿಯಲ್ಲಿ ಹಾಲಿನ ವ್ಯಾನ್ ಗಳ, ಟ್ಯಾಂಕರ್ ಗಳ ಭರಾಟೆ; ಅವು ಬಿಟ್ಟರೆ ಅಂತಹಾ ವಾಹನಗಳಿಲ್ಲದ ಹಾದಿ, ಆ ದಾರಿಯಲ್ಲಿ ನನಗಿಷ್ಟ ಬಂದ ಹಾಗೆ ಹೋಗುವುದು. ಮಧ್ಯಾಹ್ನದ ಹಾಗೆ ಕಾಲೇಜ್ ಗಳೆಲ್ಲಾ ಬಿಟ್ಟಿರುತ್ತದೆ ಸ್ಲೋ ಆಗಿ ಹೋದರೆ ಯಾರಾದರು ನೋಡಿದರೆ ( ಎಸ್ಪೆಷಲೀ ಹುಡುಗಿಯರು ) ಏನು ಅಂದುಕೊಳ್ಳಬಹುದು ಎಂಬಂಥಹ ಆತಂಕಗಳಿಲ್ಲ. ನನ್ನ ದಾರಿಗೆ ನಾನೇ ರಾಜ! ಹಾಗೆ ನಿಧಾನಕ್ಕೆ ಆಚೆ ಈಚೆ ನೋಡುತ್ತಾ, ಕಲ್ಲಡ್ಕದ ’ಲಕ್ಷ್ಮೀ ನಿವಾಸ’ ದಲ್ಲಿ ನನ್ನ ಫ಼ೆವರೀಟ್ ’ಕೆ.ಟೀ.’ ಕುಡಿದು, ಫ಼್ರೆಶ್ ಆದ ಮನಸಿಂದ ಮನೆಯತ್ತ, ಅಲ್ಲಿ ಚಾ ಲೋಟ ಹಿಡಿದು ದಾರಿ ಕಾಯುತ್ತಾ ನಿಂತಿರುವ ಅಮ್ಮ ಮತ್ತು ಬೆಳಕು ಹರಿದ ಮೇಲೆ ಹೊರಟರೆ ಏನಾಗುತ್ತಿತ್ತು ಅನ್ನುವ ಅಮ್ಮನ ಬೈಯ್ಗುಳ!
ಹಾಗೆ ಬರುತ್ತಿರುವಾಗೊಮ್ಮೆ ದಾರಿಯಲ್ಲಿ ಫ಼ರಂಗೀ ಪೇಟೆಯ ಬಳಿ ಒಬ್ಬ ಅಜ್ಜ ಶೂ ಎಲ್ಲಾ ಹಾಕಿಕೊಂಡು ಬಾಯಲ್ಲಿ ಸಿಗರೇಟು ಕಚ್ಚಿಕೊಂಡು ಜಾಗಿಂಗ್ ಹೋಗಿರುತ್ತಿರುವುದು ದೂರದಲ್ಲೇ ಕಂಡಿತು. ಬಹುಶಃ ಇವರು ಹೆಂಡತಿ ಬೈಯ್ತಾಳೆ ಅಂತ ಸಿಗರೇಟ್ ಸೇದಲು ನೆಪ ಮಾಡಿಕೊಂಡು ಹೊರಟದ್ದು ಅನ್ನಿಸಿ ಸರಿಯಾಗಿ ನೋಡೋಣ ಅಂತ ಗಾಡಿ ಸ್ಲೋ ಮಾಡಿಕೊಂಡು ಅವರ ಹತ್ತಿರ ಬರುವಾಗ ಅವರು ಕೈ ತೋರಿಸಿ ನನ್ನನ್ನು ನಿಲ್ಲಿಸಿದರು, ಯಾಕಪ್ಪಾ? ಅಂದುಕೊಳ್ಳುತ್ತಾ ನಿಲ್ಲಿಸಿದೆ, ನನ್ನ ಹತ್ತಿರ ಬಂದು, "ಕಿಡ್, ಅಲ್ಲಿಂದ ನೋಡ್ತಾ ಇದ್ದೆ, ತುಂಬಾ ಫ಼ಾಸ್ಟ್ ಆಗಿ ಬರ್ತಾ ಇದೀಯ, ಬೇಡ! ನನ್ನ ಮಗ ಕೂಡ ಹೀಗೇ ಬಿಡ್ತಾ ಇದ್ದ. ಈಗ ಅವನಿಲ್ಲ, ಆಕ್ಸಿಡೆಂಟ್ ನಲ್ಲಿ ಹೋಗಿಬಿಟ್ಟ" ಅಂತಂದು ಹೋಗೇಬಿಟ್ಟರು. ಫ಼ರಂಗೀಪೇಟೆಗೆ ಹತ್ತಿರದ ಆ ದಾರಿಯಲ್ಲಿ ಕ್ಷಣ್ ಕಾಲ ಸಾವಿನ ಭಯ ಕಾಡಿದ್ದು ಸುಳ್ಳಲ್ಲ, ಅವತ್ತಿಂದ ಆ ದಾರಿಯಲ್ಲಿ ಹೋಗುವಾಗ ಆ ಅಜ್ಜನ ಹುಡುಕುತ್ತವೆ ಕಣ್ಣು. ಇನ್ನೂ ಸಿಕ್ಕಿಲ್ಲ.
ಹೀಗೆ ಇನ್ನೊಂದು ಸಲ ನನ್ನ ಪಾಡಿಗೆ ಹೋಗುತ್ತಿದ್ದಾಗ ಸ್ಕೂಟರಲ್ಲಿ ಅಪ್ಪನ ಬೆನ್ನನ್ನು ಅವಿಚಿಕೊಂಡು ಶಾಲೆಗೆ ಹೊರಟ ಏಳೋ ಎಂಟೋ ವರ್ಷದ ಪುಟ್ಟ ಹುಡುಗಿಯೊಬ್ಬಳು, ತಟಕ್ಕನೆ ಹಿಂತಿರುಗಿ, ನಕ್ಕು ಕೈ ಆಡಿಸಿದ್ದಳು! ಅವಳು ಯಾರನ್ನು ನೋಡಿ ಕೈ ಆಡಿಸಿದ್ದಳೋ, ನನಗಂತೂ ನನಗೇ ಅನ್ನಿಸಿ, ಇಂಥಹ ಪುಟ್ಟ ತಂಗಿ ನನಗಿದ್ದರೇ, ಅನ್ನಿಸಿತ್ತು ಗಾಡವಾಗಿ!
ಈ ದಾರಿಯಲ್ಲಿ ಎದುರಾಗುವ ಮುಖ್ಯ ಶತ್ರುಗಳು ಅಂದರೆ ನಾಯಿಗಳು! ದನಗಳ ಡೈರಕ್ಷನ್ ಆದರೂ ಗೊತ್ತಾಗುತ್ತದೆ, ಇವುಗಳದಲ್ಲ, ಕಲ್ಲಡ್ಕ ಹತ್ತಿರ ಒಮ್ಮೆ ಸ್ಪೀಡಾಗಿ ಹೊಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂತು. ಏನೂ ಆಗದಿದ್ದರೂ ಜೀವ ಬಾಯಿಗೆ ಬರುವುದು ಅಂದರೆ ಏನೆಂದು ಅವತ್ತು ಅರ್ಥವಾಯಿತು!
ಹಾಗೇ ಕಿವಿಗೆ ಇಯರ್ ಫ಼ೋನ್ ಸಿಕ್ಕಿಸಿಕೊಂಡು ಒಂದ್ಸಲ ಬೈಕಲ್ಲಿ ಹೋಗಿದ್ದೆ, ಒಂದೇ ಸಲ! ವಿಟ್ಲದ ಹತ್ತಿರದ ತಿರುವಲ್ಲಿ ಯಾವುದೋ ಮೆಲೋಡಿ ಸಾಂಗ್ ಗೆ ಕೊಂಚ ಇಮೋಷನಲ್ ಆದ ಬೈಕ್ ತಾನಾಗಿ ರೋಡ್ ಬಿಟ್ಟು ಕೆಳಗಿಳಿದು, ಓಲಾಡಿ ಅಡ್ಡ ಬಿತ್ತು! ನಾನು ಕಿವಿಯೊಳಗಿದ್ದ ಹಾಡಿನ ಸಮೇತ ರೋಡಿಗೆ ಬಿದ್ದೆ! ಅವತ್ತಿಂದ ನನ್ನ ಮ್ಯೂಸಿಕ್ ಪ್ರಿಯ ಬೈಕ್ ಜೊತೆಗಿರುವಾಗ ಹಾಡು ಕೇಳಬಾರದೆಂಬ ಬುದ್ಧಿ ಬಂತು.
ಆದರೂ ಮನಸು ಇನ್ನೂ ಕನಸುತ್ತದೆ, ಬೆಳ್ಳಂಬೆಳಗ್ಗೆ, ಹೀಗೆ ಬೈಕಲ್ಲಿ ಹೋಗುವಾಗ , ದಾರಿಯಲ್ಲಿ ಯಾರೋ ಹೆಸರು ತಿಳಿಯದ , ಊರು ತಿಳಿಯದ ಅಪರಿಚಿತ ಸುಂದರಿಯೊಬ್ಬಳು ಕೈ ತೋರಿಸಿ ಲಿಫ಼್ಟ್ ಕೇಳಿದರೇ? ಅಲ್ಲೇ ಒಂದು ಡ್ಯುಯೆಟ್ ಶುರುವಾದರೇ?
ಟ್ರಾಜಿಡಿ ಅಂದರೆ, ಹಾಗೆ ಕೈ ಚಾಚಿ ನಿಲ್ಲಿಸಿ, "ಗಾಡಿ ಸೈಡಿಗೆ ಹಾಕಪ್ಪಾ" ಅನ್ನೋದು ಮಾತ್ರ, ಯಾವಾಗ್ಲೂ ಪೋಲೀಸರು!!!

Friday, November 4, 2011

ಹೀಗೆಯೇ ಒಂದು ಕತೆ!??

ರಿಫ಼ೈನರಿ ಅಂದ ಮೇಲೆ, ಅದೂ ಇದೂ ಅಟೆಂಡ್ ಮಾಡೋದು, ರಿಪೇರಿ ಮಾಡೋದು ಎಲ್ಲಾ ಸಹಜವೇ; ಆದರೆ ಕೆಲವು ಎಫ಼್.ಟಿ.,ಪಿ.ಟಿ.ಗಳೆಲ್ಲ ತುಂಬಾ ಹೈಟಿನಲ್ಲಿರುತ್ತವೆ, ಅದನ್ನ ಚೆಕ್ ಮಾಡಬೇಕು ಅಂದರೆ ಅಪ್ರೋಚ್ ಇಲ್ಲ, ಸ್ಕಫ಼್ ಹೋಲ್ಡ್ಂಗ್ಸ್ ಬೇಕು. ಈ ಸ್ಕಫ಼್ ಹೋಲ್ಡಿಂಗ್ಸ್ ಹಾಕಲು ಇರುವ ಕಾಂಟ್ರಾಕ್ಟ್ ಗ್ರೂಪಿನಲ್ಲಿ ಹೆಚ್ಚಾಗಿ ಕೆಲಸ ಮಾಡೋರು ಉತ್ತರ ಭಾರತೀಯರು. ಅಲ್ಲೆಲ್ಲ ಎಕರೆಗಟ್ಟಲೆ ಜಮೀನು ಇರುವವರು, ಬರ ಬಂದೋ ಅಥವಾ ಇನ್ಯಾವುದೋ ಕಾರಣಕ್ಕೆ ಇಲ್ಲಿ ಬಂದು,ಇಲ್ಲಿ ದಿನಗೂಲಿ ಲೆಕ್ಕದಲ್ಲಿ ದುಡಿಯುತ್ತಿರುತ್ತಾರೆ. ಅಲ್ಲಲ್ಲಿ ಹರಿದ, ಪೇಂಟ್ ಮೆತ್ತಿಕೊಂಡ ಬಟ್ಟೆಗಳಲ್ಲಿ ಇವರು ಪ್ಲಾಂಟ್ ತುಂಬೆಲ್ಲಾ ಕೊಲಾಜ್ ಚಿತ್ರದಂತೆ ನಡೆದಾಡುವಾಗ ನಾವೆಷ್ಟು ಅದೃಷ್ಟವಂತರು ಅನಿಸುತ್ತದೆ. ನಮ್ಮನ್ನೆಲ್ಲ ಇವರು "ಭೈಯ್ಯಾ.." ಅಂತ ಕರೆದು ಮಾತಾಡಿಸುವ ಕಾರಣ ಇಲ್ಲಿರುವವರ ಬಾಯಲ್ಲಿ ಅವರೆಂದರೆ ’ಭೈಯ್ಯ’ ಅಷ್ಟೇ!
ಹೀಗೆ ಭೈಯ್ಯಂದಿರ ಗುಂಪಲ್ಲಿ ನನಗೆ ಪರಿಚಯವಾದವನೇ ರಾಮ; ನಮ್ಮ ಪ್ಲಾಂಟ್ ಶಟ್ ಡೌನ್ ಟೈಮ್ ನಲ್ಲಿ ಪಿಟ್ಟರ್ ಗಳೊಂದಿಗೆ ಬಂದವ. ನಡುರಾತ್ರಿ ಯಾವ ಹೊತ್ತಲ್ಲಿ, ಮೆಕ್ಯಾನಿಕಲ್ ಕಂಟೇನರ್ ಗೆ ಹೋಗಿ ಕರೆದರೂ ಎದ್ದು ಬಂದು ಕೆಲಸ ಮಾಡುತ್ತಿದ್ದ, ಒಂದು ಚಾ ಕೊಟ್ಟರೆ ಎಂಥಾ ಕೆಲಸಕ್ಕೂ ಸೈ!
ಹೀಗೊಮ್ಮೆ ನಡುರಾತ್ರಿಯಲ್ಲಿ ಯಾವುದೋ ಕೆಲಸ ಮಾಡುತ್ತಿದ್ದಾಗ ನಾನೂ ಅಲ್ಲೇ ನಿಂತಿದ್ದೆ; ಕೆಲಸ ಮಾಡುತ್ತಿದ್ದವನು ನಡುವೆ ಒಮ್ಮೆ ಕತ್ತು ಹೊರಳಿಸಿ, "ಸಾಬ್, ಆಪ್ಕಿ ಶಾದಿ ಹುಯಿ ಹೈ ಕ್ಯಾ?" ಎಂದು ಕೇಳಿದ, ಈ ನಡುರಾತ್ರಿಯಲ್ಲಿ ಇದೆಂತಹ ಪ್ರಶ್ನೆ ಅನ್ನಿಸಿದರೂ, "ನಹಿ ಯಾರ್.." ಅಂದುತ್ತರಿಸಿದೆ. ಇಷ್ಟಗಲ ಕಣ್ಣರಳಿಸಿ, "ಹಮಾರೆ ಯಹಾಂ ಬೀಸ್, ಇಕ್ಕೀಸ್ ಕೊ ಹೊತೀ ಹೈ.." ಅಂದ. ಎನನ್ನಿಸಿತೋ ತನ್ನ ಕಥೆ ಹೇಳಲು ಶುರು ಹಚ್ಚಿಕೊಂಡ; ಅವನ ವಿವರಣೆಯಿಂದ ತಿಳಿದದ್ದು ಇಷ್ಟು- ಊರಲ್ಲಿ ಯಾರದೋ ಮದುವೇಲಿ ಒಂದು ಹುಡುಗೀನ ನೋಡಿ ಇಷ್ಟಪಟ್ಟನಂತೆ, ಅವಳಪ್ಪನ ಬಳಿ ಕೇಳಿದನಂತೆ, ಅವಳಪ್ಪ ಎರಡು ಕುದುರೆ ಇರುವ ಗಾಡಿ ಖರೀದಿಸು ಆಮೇಲೆ ಮದುವೆ ಅಂತಂದು ಕಳಿಸಿದರಂತೆ. ಅಲ್ಲಿಂದ ಓಡಿ ಬಂದವ ಮುಂಬಯಿಯಲ್ಲಿ ಕೆಲ ಕಾಲ ಕೂಲಿ ಮಾಡಿಕೊಂಡಿದ್ದನಂತೆ, ಅಲ್ಲಿ ದುಡಿದು ಸುಣ್ಣವಾದವನಿಗೆ, ಯಾರೋ ಪರಿಚಯದವರು ಇಲ್ಲಿನ ರೈಲು ಹತ್ತಿಸಿ ಕಳಿಸಿದರಂತೆ; ಈಗ ಇಲ್ಲಿ. ನನಗಾದ ಅಚ್ಚರಿ ತೋರಗೊಡದೆ, " ಕಿತ್ನೆ ಸಾಲ್ ಹುವೇ ಯೇ ಸಬ್ ಹೋಕರ್?" ಅಂತ ಕೇಳಿದೆ. ಮೂರು ಬೆರಳೆತ್ತಿ ತೋರಿಸಿದ. ಈ ನಡುರಾತ್ರಿಯಲ್ಲಿ ಇವನು ಹೀಗೆ ಮನಸು ತೆರೆದು ತನ್ನ ಕಥೆ ಹೇಳುವುದು, ಇವನಿಗೆ ಗೊತ್ತೇ ಇಲ್ಲದ ನಾನು ಅದನ್ನ ಕೇಳುವುದು ಎಲ್ಲಾ ಎಷ್ಟು ವಿಚಿತ್ರ ಅನ್ನಿಸಿತು. ಹಾಗೇ ನಾನು ನನ್ನ ಕಥೆ ಹೇಳುವಂತಿದ್ದರೆ? ಬೇಡ ಅನ್ನಿಸಿತು.
ಅಷ್ಟರಲ್ಲಿ ಟೀ ಬಂತು. ಬೇರೇನೂ ಹೇಳಲು ತೋಚದೆ, "ಆ ಭೈಯ್ಯಾ, ಸ್ನಾಕ್ ಭೀ ಲೇ ಲೊ" ಅಂದೆ. "ಶುಕ್ರಿಯಾ ಸಾಬ್" ಅಂದನ್ನುತ್ತಾ, ತಿಂಡಿ ತೆಗೆದುಕೊಂಡು ತಿನ್ನುತ್ತಾ ಕೂತವ, ಥಟ್ಟನೇ ಏನೋ ನೆನಪಾದಂತೆ, "ಅಬ್ ಇಥ್ ನೇ ಸಾಲ್ ಗುಜ಼ರ್ ಗಯೆ, ಮೆ ತೊ ಉದರ್ ಗಯಾ ನಹೀ, ಉಸ್ ಕೀ ಶಾದಿ ನಹೀ ಹುಯಿ ಹೋಗಿ ನಾ?" ಎಂದು ನನ್ನ ನೋಡುತ್ತಾ, ತನ್ನೊಳಗೇ ಎಂಬಂತೆ ಕೇಳಿಕೊಂಡ; "ನಹೀ ಯಾರ್, ಫ಼ಿಕರ್ ಮತ್ ಕರ್" ಅಂತ ನನಗೆ ಗೊತ್ತೇ ಇರದ ಅವನ ಹುಡುಗಿಯ ಪರವಾಗಿ ಹೇಳಿದೆ. ಅಷ್ಟಕ್ಕೇ ಖುಷಿಯಾದ ಆತ ,"ಚಲೋ ಜೀ, ಭಗವಾನ್ ಹೆ ಊಪರ್.." ಎಂದೆನ್ನುತ್ತಾ ತನ್ನ ತಿಂಡಿ ಮುಗಿಸಿ, ಮತ್ತೆ ಮಲಗಲು ಹೋದ ನಗುತ್ತಾ.
ಆ ಶಟ್ ಡೌನ್ ಪೂರ್ತಿ ಆತ ನಮ್ಮ ಪ್ಲಾಂಟಲ್ಲೇ ಇದ್ದ; ನಾನು ಡ್ಯೂಟಿಗೆ ಬಂದಾಗಲೆಲ್ಲ ಕಣ್ಣಿಗೆ ಸಿಗುತ್ತಿದ್ದ ಏನಾದರು ಕೆಲಸ ಮಾಡಿಕೊಂಡು. ಮತ್ತೆಂದೂ ಅವನು ಅವನ ವಿಷಯ ಎತ್ತಲಿಲ್ಲ, ನಾನೂ ಕೇಳಲಿಲ್ಲ.
ಶಟ್ ಡೌನ್ ಎಲ್ಲಾ ಮುಗಿದು, ಅವರೆಲ್ಲಾ ಹೋಗಿ, ಪ್ಲಾಂಟ್ ನಾರ್ಮಲ್ ಆಗಿ, ಮತ್ತೆ ನಾವು ಯಾವಗಿನಂತೆ ಕೂತು ಕನಸುವ ಸ್ಥಿತಿಗೆ ಮರಳಿದ ಮೇಲೆ, ಮನೆ ಕಟ್ಟುವ, ಅದಕ್ಕಾಗಿ ಜಾಗ ಖರೀದಿಸುವ ನನ್ನ ಹಳೆಯ ಕನಸು ಮರುಕಳಿಸಿತು. ಹಾಗೊಂದು ದಿನ, "ಅಲ್ಲೊಂದು ಜಾಗ ಇದೆ, ನೋಡಲು ಹೋಗೋಣ" ಅಂದ ಪರಿಚಯದವರ ಕಾಯುತ್ತಾ ಪೇಟೆಯಲ್ಲಿ ನಿಂತಿದ್ದೆ. ಸ್ವಲ್ಪ ದೂರದಲ್ಲಿ ಗುಂಪೊಂದು ಬರುವುದು ಕಂಡಿತು. ಅರೇ! ನಮ್ಮ ’ಭೈಯ್ಯ’ ನವರ ಗುಂಪು! ಅವರಲ್ಲಿ ರಾಮನೂ ಇದ್ದ. ಮೈಯ್ಯೆಲ್ಲ ಕೊಳೆಯಾದ, ಹರಿದ ಬಟ್ಟೆಗಳು, ಅವರಲ್ಲೊಬ್ಬ ತನ್ನ ಮೊಬೈಲ್ ನಲ್ಲಿ ದೊಡ್ದದಾಗಿ ಹಾಡು ಹಾಕಿದ್ದ, ಯಾವುದೋ ಗೊತ್ತಾಗದ ಭಾಷೆಯ ಹಾಡು; ಅವರೆಲ್ಲಾ ಆ ಹಾಡಿಗೆ ತಲೆದೂಗುತ್ತಾ, ಕೈ ಕಾಲು ಆಡಿಸುತ್ತಾ ಭಯಂಕರ ಖುಷಿಯಲ್ಲಿ ನಡೆದು ಹೋಗುತ್ತಿದ್ದರು. ರಾಮನಂತೂ ದೊಡ್ಡದಾಗಿ ಆ ಹಾಡು ಹಾಡುತ್ತಾ ನಗುತ್ತಾ ಇದ್ದ. ನಿಜವಾದ ಖುಷಿ ಎಲ್ಲಿದೆ ಅನ್ನೋ ಪ್ರಶ್ನೆ ಸುಮ್ಮನೆ ನನ್ನ ಮನಸಲ್ಲಿ ಮಿಂಚಿ ಮರೆಯಾಯಿತು. ಅವರು ಯಾರೂ ನನ್ನ ಗುರುತಿಸಲಿಲ್ಲ.
ಇದಾಗಿ ನಾಲ್ಕು ತಿಂಗಳಿಗೆ, ಯಾವುದೋ ವಾಲ್ವ್ ಪ್ರಾಬ್ಲಮ್ ಆಗಿ ಪ್ಲಾಂಟ್ ಶಟ್ ಡೌನ್ ತಗೊಳ್ಳೋದು ಅನಿವಾರ್ಯವಾಯ್ತು. ಈ ಸಲ ಬಂದ ಗ್ರೂಪ್ ಅವರೇ ಆದರೂ, ಅವರಲ್ಲಿ ರಾಮನಿರಲಿಲ್ಲ; ಕೆಲಸಗಳ ಮಧ್ಯೆ ಅವರಲ್ಲೊಬ್ಬನನ್ನು ವಿಚಾರಿಸಿದೆ, "ರಾಮ್ ಕಹಾನ್ ಹೈ?" ಆತ ನನ್ನನ್ನೊಮ್ಮೆ ನೋಡಿ, ಅವಜ್ಞೆಯಿಂದ ಪಕ್ಕದಲ್ಲೊಮ್ಮೆ ಉಗುಳಿ, "ಗಯಾ..." ಎಂದುತ್ತರಿಸಿ, ತನ್ನ ಕೆಲಸದಲ್ಲಿ ಮಗ್ನನಾದ. ಮತ್ತೆ ಕೇಳಲು ಮನಸು ಬರಲಿಲ್ಲ.
ಹೋಗಿದ್ದಾನಾ? ಮದುವೆಯಾದನಾ? ಅವಳು ಇವನಿಗೆ ಕಾದು ಕುಳಿತಿದ್ದಳಾ? ಅಲ್ಲ ಸತ್ತೇ ಹೋಗಿದ್ದಾನಾ?!! ಯಾರಿಗೆ ಗೊತ್ತು?
ನಾನಂತೂ ಮತ್ತೆ ಅವನನ್ನು ನೋಡಲಿಲ್ಲ.

Thursday, October 27, 2011

ವಾಸ್ತವ

ಅಲ್ಲೆಲ್ಲೋ ದೂರದಲ್ಲಿ ನಡೆವ,
ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ,
ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ,
ನಮ್ಮ ನಮ್ಮ ಮನದ ಗೂಡೊಳಗೆ
ಬೆಚ್ಚಗೆ ಹೊದ್ದು ಮಲಗಿ,
ಸುಳ್ಳು ಸುಳ್ಳೇ ಕನಿಕರ!

ಬಾರದ ಲಾಟರಿ ದುಡ್ಡಿಗಾಗಿ ಹತಾಶೆ;
ಈ ಕ್ಷಣದೊಳಗೆ ಎಲ್ಲ ಬದಲಾಗುವ ಕನಸು,
ಕನಸ ಕೊಳ್ಳುತಾ,
ಮುಖವಾಡಗಳೊಡನೆ ದಿನ ದೂಡಿ,
ರಾತ್ರಿಯ ಕತ್ತಲಲ್ಲಿ ಸಾವಿನ ಭಯ;
ಮೆಲ್ಲಗೆ ಹುಟ್ಟಿಕೊಳ್ಳುವ ಪಾಪಪ್ರಜ್ಞೆಯ ಹೊಸಕಿ,
ಇಷ್ಟಿಷ್ಟೇ ಕೈ ಚಾಚಿ,
ಜಂಜಾಟಗಳಿಗೆಲ್ಲಾ ನಿಟ್ಟುಸಿರಲ್ಲೇ ಸಂತನ ಧ್ಯಾನ!

ಅದೇ ರಾಗ, ಅದೇ ತಾಳ,
ಎಲ್ಲ ಬದಲಿಸುವ ’ಸೂಪರ್ ಮ್ಯಾನ್’ ಗಾಗಿ ಮುಗಿಯದ ನಿರೀಕ್ಷೆ;
ನಾವು ಮಾತ್ರ,
ನಿರ್ಲಕ್ಷಿತರು,ಕಳಂಕರಹಿತರು,
ಮತ್ತೆಲ್ಲರೂ, ಛೀ! ಥೂ! ಭ್ರಷ್ಟರು!
ನಿಜವಾಗಿಯೂ,
ಬದುಕ ಬದಲಿಸಬಹುದೇ?

Sunday, July 24, 2011

ಒಂದಿಷ್ಟು ಕನಸುಗಳು


ನಮ್ಮೊಳಗೆ ನಾವಿರುವ ಮಾತುಗಳ,
ಮೌನದ ಹಂಗಿಲ್ಲದೆ ಆಡಬೇಕು;
ಹಳೆಯ ನೆನಪುಗಳ ದೋಣಿಯ ಮಳೆಯ ನೀರಲಿ
ಹರಿಬಿಡಬೇಕು;
ತುಸು ಪ್ರೀತಿ, ತುಸು ಮುನಿಸ
ತೋರಿ ನಗುತಿರಬೇಕು,
ಎದೆಯೊಳಗಿನ ನೋವ ಬಿಚ್ಚಿ
ಹಗುರಾಗಬೇಕು;
ಒಡೆದ ಸಂಬಂಧಗಳ ಚೂರುಗಳ
ಹೆಕ್ಕಿ ಜೋಡಿಸಬೇಕು;
ಮತ್ತು,
ಇನ್ನೂ ಬೇಕು ಅನ್ನೋವಾಗ,
ಬಿಟ್ಟು ಹೊರಡಬೇಕು....

Tuesday, July 5, 2011

ಸಾವು,ಬದುಕಿನ ನಡುವೆ...

ನಮ್ಮೊಳಗಿನ ಒಂಟಿತನಕ್ಕೆ,
ಸದಾ ಅವರಿವರ ದೂರುತ್ತಾ,
ತುಟಿಯಲೊಂದು ನಗುವ ಗೀರೆಳೆದು,
ಸಾವಿಲ್ಲದ ಭ್ರಮೆಗಳಲಿ ಕನಸಿಗಿಷ್ಟು ತೇಪೆಗಳು;
ಎಂದೋ ಮುಗಿದ ಕಥೆಗೆ ಈಗ ನೋವು,
ನಮಗೇ ತಿಳಿಯದ ಗುಟ್ಟುಗಳ
ಮಾತೊಳಗೆ ಹಂಚುತ್ತಾ,
ಸುಳ್ಳು ಸುಳ್ಳೇ ಸುಖದ 'ಆಹಾ!' ಗಳು,
ನೋವ ಮರೆಯಲು ಸಾವಿರ ಹುಸಿ ಭರವಸೆಯ ಮುಲಾಮುಗಳು,
ನಿನ್ನೆಯವರೆಗೆ ಅವನಾಗಿದ್ದವ,
ಇಂದೀಗ,
ಬರಿಯ ಬಾಡಿ ಆಗಿ
ಮಾಯವಾದರೂ,
ಎರಡು ದಿನ ಬೇಜಾರು,
ಆಮೇಲೆ ಬದುಕು ಯಥಾಪ್ರಕಾರ;
ಮುಗಿಯದ ಆಸೆಗಳು, ಸಣ್ಣತನಗಳು,ಜಗಳಗಳು;
ಮರೆಯಲಾಗದ್ದು,
ನಾಳೆಗೆ ನಾವೂ, ನೀವೂ,
ಬರಿಯ ನೆನಪು ಮಾತ್ರ!

Sunday, June 12, 2011

ತಲ್ಲಣ

ತನ್ನ ಬೆನ್ನನ್ನು ಗಟ್ಟಿಯಾಗಿ ಅವಿಚಿಕೊಂಡಿದ್ದ ವೀಣಾಳ ಸ್ಪರ್ಶದ ಪುಳಕವನ್ನು ಅನುಭವಿಸುತ್ತಾ ಪುತ್ತೂರಿಂದ ಮಂಗಳೂರಿಗೆ ಬೈಕಲ್ಲಿ ರಭಸವಾಗಿ ಹೋಗುತ್ತಿದ್ದ ಕರುಣಾಕರ, ಕಲ್ಲಡ್ಕ ಬರುತ್ತಿದ್ದಂತೆ ಯಾಕೋ ಅಸ್ವಸ್ಥನಾದ, ತಾನು ಚಿಕ್ಕವನಿದ್ದಾಗ ಕಾಲುನೋವಿನಿಂದ ನರಳುತ್ತಿದ್ದಾಗ, ಕಡೆಶ್ವಾಲ್ಯದಲ್ಲಿ ಯಾರೋ ದೊಡ್ಡ ಡಾಕ್ಟ್ರಿದ್ದಾರೆ ಅಂತ ತನ್ನನ್ನು ಕರಕೊಂಡು ಅಮ್ಮ ಬಸ್ಸಿಗಾಗಿ ಕಾದ ಜಾಗ ಇದು ಅಂತ ಹೊಳೆದು, ಅದಕ್ಕೂ ಈಗಾಗೋದಕ್ಕೂ ಏನು ಸಂಬಂಧ ಎಂದು ಯೋಚಿಸತೊಡಗಿದ. ಅದು ಅಷ್ಟು ಸ್ಪಷ್ಟವಾಗಿ ಮನದಲ್ಲಿ ಅಚ್ಚೊತ್ತಿರಲು ಕಾರಣ, ಆ ದಿನ ಬಸ್ಸು ಅರ್ಧ ಗಂಟೆ ತಡವಾಗಿ ಬಂದಿತ್ತು ಮತ್ತು ಆ ಅರ್ಧ ಗಂಟೆಯೂ ತಾನು ’ಕುಂಯಿ...’ ಎಂದು ರಾಗ ಎಳೆಯುತ್ತಾ ಅಳುತ್ತಿದ್ದ; ಆಗ ಅಲ್ಲಿದ್ದವರ ಕುತೂಹಲದ ಕಣ್ಣುಗಳಿಗೆ, ತನ್ನನ್ನು ಸಮಾಧಾನ ಮಾಡಲೂ ಆಗದೆ ಅಮ್ಮ ಮುಜುಗರದಿಂದ ನಿಂತದ್ದು ನೆನಪಾಯಿತು. ಅಷ್ಟರಲ್ಲಿ ’ಲಕ್ಷ್ಮೀ ನಿವಾಸ’ ಹೋಟೆಲ್ ಬಂತು. ಕಲ್ಲಡ್ಕ ಟೀ ಕುಡಿಯೋಣ ಅಂತ ಬೈಕ್ ನಿಲ್ಲಿಸಿದವನಿಗೆ ವೀಣಾಗೆ ಇದನ್ನೆಲ್ಲ ಹೇಳೋದೋ, ಬೇಡವೋ ಎಂಬ ಗೊಂದಲಕ್ಕೆ ಬಿದ್ದ; ’ನಮ್ಮ ನಡುವೆ ಯಾವುದೇ ಸೀಕ್ರೆಟ್ಸ್ ಇರಬಾರದು, ನಾವಿಬ್ಬರು ಸೋಲ್ ಮೇಟ್ಸ್ ಅಂತ ಇಬ್ರೂ ಮಾಡಿದ್ದ ಪ್ರಾಮಿಸ್ ಗಳೆಲ್ಲ ನೆನಪಾಯಿತು. ತಾನು ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ ಎರಡು ಮನೆ ಆಚೆಯ ಹುಡುಗಿಗೆ ಕಾದು ನಿಂತು, ಇದು ಉದ್ದೇಶಪೂರ್ವಕ ಅಂತ ತಿಳಿಯದಂತೆ ಅವಳ ಹಿಂದೆ ಹೋಗುತ್ತಿದ್ದುದು, ಅಪ್ಪನ ಸಹಿ ರಿಪೋರ್ಟ್ ಕಾರ್ಡ್ ನಲ್ಲಿ ಪೋರ್ಜರಿ ಮಾಡಿದ್ದು, ಎಲ್ಲಾ ಹೇಳಿಕೊಂಡು ಅವಳ ಕೀಟಲೆಗೆ, ನಗುವಿಗೆ ವಸ್ತುವಾಗಿದ್ದ; ಆದರೆ ಈಗ ಇದನ್ನು ಹೇಳೋದು ಬೇಡ ಅಂತನಿಸಿತು. ಸುಮ್ಮನೆ ಕೆ.ಟಿ. ಆರ್ಡರ್ ಮಾಡಿ, ಅವಳ ಕಣ್ಣನ್ನೇ ನೋಡುತ್ತಾ ಕುಳಿತವನಿಗೆ, ನನಗೇ ಅಂತ ಕೆಲವು ರಹಸ್ಯಗಳು ಬೇಕು ಅಂತನ್ನಿಸಿತು; ಅಂಥಾ ಭಾರಿ ಅಲ್ಲದ, ಆದರೂ ತನಗೆ ಮಾತ್ರ ಗೊತ್ತಿರುವುದು ಅಂದುಕೊಳ್ಳುವಾಗ ಖುಶಿ ತರುವವು. ಆದರೆ ಪರಿಚಯ ಪ್ರೀತಿಗೆ ತಿರುಗಿದ ಗಳಿಗೆಗಳಲ್ಲಿ, ತನ್ನದೆಲ್ಲವನ್ನೂ ಹೇಳಿಬಿಡಬೇಕು ಅನ್ನುವ ಆತುರಕ್ಕೆ ಸಿಕ್ಕಿ, ಖಾಲಿಯಾಗಿ ಈಗ ಉಳಿದಿರುವುದು ಬರೀ ಇಂಥವೇ ಒಂದೆರಡು ಮರೆತಂಥ ನೆನಪುಗಳು ಮಾತ್ರ; ವೀಣಾಗೆ ಮಾತ್ರ ಅಂಥದ್ದೇನೂ ಅನಿಸಿರಲಿಲ್ಲ, ಅವಳು ಚಿಕ್ಕವಳಿದ್ದಾಗ ಮನೆ ಜಗಲಿಯಿಂದ ಕೆಳಗೆ ಜಿಗಿದು ಆಡುತ್ತಿದ್ದರಿಂದ ಹಿಡಿದು, ಹಾಗೊಮ್ಮೆ ಜಿಗಿದಾಗ ಮನೆ ಪಕ್ಕದ ಚರಂಡಿಗೆ ಬಿದ್ದದ್ದು ಕೂಡ ಯಾವುದೇ ಮುಜುಗರವಿಲ್ಲದೆ ಹೇಳಿದ್ದಳು; ಹೈ ಸ್ಕೂಲ್ ಓದೋವಾಗ ಯಾವನೋ ಉದ್ದ ಕೂದಲ ಹುಡುಗ ತುಂಬಾ ಇಷ್ಟವಾಗಿದ್ದು ಹೇಳಿ ಬಾಯಿ ತುಂಬ ನಕ್ಕಿದ್ದಳು. ಆದರಲ್ಲಿ ಅರಗಿಸಿಕೊಳ್ಳೊದಾದರೆ ಅರಗಿಸಿಕೊ, ನನ್ನ ಭಾರವಂತೂ ಇಳಿಯಿತು ಎಂಬ ನಿರುಮ್ಮಳ ಭಾವ ಕಂಡಿತ್ತು ಕರುಣಾಕರನಿಗೆ. ಇಷ್ಟು ವರ್ಷಗಳಿಂದ ತನ್ನ ಅರಿಯದ ಜೀವವೊಂದು ಹಠಾತ್ತಾಗಿ ಎಂಬಂತೆ ಪರಿಚಯವಾಗಿ ಪ್ರೀತಿ ಶುರುವಾದಂತೆ ತನ್ನ ಗುಟ್ಟುಗಳ ಹೇಳುವ ಪರಿ ಅವನಿಗೆ ಆಶ್ಚರ್ಯ ತಂದಿತ್ತು. ಕರುಣಾಕರನಿಗೆ ಏನು ಹೇಳಲೂ ತೋಚದೆ, ಆರ್ಡರ್ ಮಾಡಿದ ಟೀ ಬರುವಷ್ಟು ಹೊತ್ತು, ಕಂಪೆನಿ ಬಗ್ಗೆ, ಅಲ್ಲಿನ ಜಗಳಗಳ ಬಗ್ಗೆ, ಮೇಲಿನವರಿಗೆ ಮಾಡುವ ಬಟರಿಂಗ್ ಬಗ್ಗೆ ಹೇಳುತ್ತಾ ಹೋದ; ವೀಣಾ ಆಸಕ್ತಿಯಿಂದ ಕೇಳುತ್ತಿದ್ದಳು. ಯಾಕೋ ಇದೆಲ್ಲಾ ಸುಮ್ಮನೇ ಅಂತನ್ನಿಸಿ, ತಾನು ಹೇಳುತ್ತಿದ್ದ ಅಸಂಬದ್ದವನ್ನು ಅಲ್ಲಿಗೇ ನಿಲ್ಲಿಸಿ ಕರುಣಾಕರ ಅವಳ ಮುಖವನ್ನು ನೋಡತೊಡಗಿದ; ’ ಇನ್ನೊಂದು ವರ್ಷದೊಳಗೆ ಮನೇಲಿ ಹೇಳ್ಬೇಕು..’ ಕ್ಯಾಶುವಲ್ ಆಗಿ ಎಂಬಂತೆ ಹೇಳಿ, ವೀಣಾ ನಕ್ಕಳು.
ಯಾಕೋ ಮತ್ತೆ ಬಾಯಾರಿಕೆ ಜಾಸ್ತಿಯಾದಂತಾಯಿತು ಕರುಣಾಕರನಿಗೆ, ಕಳೆದೊಂದು ವಾರದಿಂದ ಭಯಂಕರ ಹಸಿವು ಬೇರೆ; ವೀಣಾಗೆ ಹೇಳಿದ್ರೆ ತಿಂಡಿಪೋತ ಅಂದು ರೇಗಿಸ್ತಾಳೆ ಅಂತ ಹೇಳಿರಲಿಲ್ಲ, ಟೀ ಕುಡಿದು, ಬಿಲ್ಲು ಕೊಟ್ಟು ಹೊರಬಂದವನಿಗೆ ಯಾಕೋ ಏನೋ ಸರಿ ಇಲ್ಲ ಅನಿಸತೊಡಗಿತು; ಸುಮ್ಮನೆ ಬೈಕನ್ನು ಓಡಿಸಿದ ಮಂಗಳೂರತ್ತ, ವೀಣಾಳನ್ನ ಅವಳ ರೂಮ್ ಹತ್ತಿರ ಇಳಿಸಿ,’ಮೆಸೇಜ್ ಮಾಡ್ತೀನಿ’ ಅಂತಂದು ’ಬಾಯ್’ ಹೇಳಿ, ತನ್ನ ರೂಮಿಗೆ ಬಂದವನಿಗೆ ತೀರ ಸುಸ್ತೆನಿಸತೊಡಗಿತು, ನೈಟ್ ಡ್ಯೂಟಿಗೆ ರಜೆ ಮಾಡಿ ಬಿದ್ದುಕೊಂಡ, ವೀಣಾಳ ಮೆಸೇಜಿಗೆ ಉತ್ತರಿಸಲೂ ಉದಾಸೀನವೆನಿಸಿತು..
ಮರುದಿನ ಡಾಕ್ಟ್ರ ಶಾಪ್ ಗೆ ಹೋಗಿ ಕಾಯುತ್ತಿದ್ದಾಗ, ತಾನಿನ್ನೂ ಈ ವಿಷಯವನ್ನು ವೀಣಾಗೆ ಹೇಳಿಲ್ಲ ಎಂದು ನೆನಪಾಗಿ, ಆಮೇಲೆ ಹೇಳಿದರಾಯ್ತು ಅಂದುಕೊಂಡ. ಡಾಕ್ಟ್ರು ಕರುಣಾಕರನ ಪರೀಕ್ಷೆ ಮಾಡಿ, ಸಿಮ್ಟಮ್ಸ್ ಕೇಳಿ, ’ ನೀವೊಂದ್ಸಲ ’ಆರ್.ಬಿ.ಯೆಸ್.’ ಮಾಡ್ಸಿ.ಸುಮ್ನೆ ಶುಗರ್ ಲೆವೆಲ್ ಚೆಕ್ ಮಾಡ್ಬಿಡೋಣ’ ಎಂದು ಅವನನ್ನು ಕಳಿಸಿದರು, ಅವರ ಮಾತಿನ ಧಾಟಿ, ಹಾವ ಭಾವ, ಎಲ್ಲಾ ಯಾವುದೋ ಒಂದರತ್ತ ಬೆಟ್ಟು ಮಾಡುತ್ತಿರುವಂತೆ ಅನ್ನಿಸಿ ಕರುಣಾಕರನಿಗೆ ಭಯ ಶುರುವಾಯಿತು; ವೀಣಾ ಬಳಿ ಇದನ್ನೆಲ್ಲ ಹಂಚಿಕೊಳ್ಳಬೇಕು ಎಂದು ಫೋನೆತ್ತಿದವನು ಯಾಕೋ ಸುಮ್ಮನಾದ, ಆತಂಕದಲ್ಲಿದ್ದಾಗ ,’ ಏನೂ ಇಲ್ಲ ಡಿಯರ್, ನೀನು ವರ್ರಿ ಮಾಡ್ಕೋಬೇಡ..’ ಅನ್ನುವ ಅವಳ ಸಮಾಧಾನದ ಮಾತುಗಳು, ಕಿರಿಕಿರಿಯುಂಟು ಮಾಡುತ್ತೆ ಅನಿಸಿತು. ಟೆಸ್ಟಿಗೆ ಬ್ಲಡ್ ಕೊಟ್ಟು ’ ಒಂದು ಗಂಟೆ ವೈಯ್ಟ್ ಮಾಡಿ ಸಾರ್..’ ಎಂಬ ಉತ್ತರ ಪಡೆದು, ಕಾಯುತ್ತಾ ಕುಳಿತವನಿಗೆ, ಈ ಜಗತ್ತಲ್ಲಿ ತನ್ನನ್ನು ಬಿಟ್ಟು ಎಲ್ಲರೂ ಸುಖವಾಗಿದ್ದಾರೆ ಅಂತ ಗಾಢವಾಗಿ ಅನ್ನಿಸಿತು. ಹಾಗೆ ಯೊಚಿಸುತ್ತಿದ್ದಾಗಲೇ ರಿಪೋರ್ಟ್ ಬಂತು; ಅದನ್ನು ಹಿಡಿದುಕೊಂಡು ಡಾಕ್ಟ್ರ್ ಬಳಿ ಹೋದ; ರಿಪೋರ್ಟ್ ಓದಿ ಡಾಕ್ಟ್ರ್ ’ಒಳಗೆ ಬನ್ನಿ’ ಎಂದು ಇನ್ನೊಂದು ಕೋಣೆಗೆ ಕರೆದುಕೊಂಡು ಹೋದಾಗ, ಕರುಣಾಕರನಿಗೆ ಆತಂಕವಾಗತೊಡಗಿತು; ಅವರು ಮೆಲ್ಲನೆ ತಗ್ಗಿದ ದನಿಯಲ್ಲಿ,’ ನೋಡಿ, ನಿಮ್ಮ ಫ಼್ಯಾಮಿಲಿಲಿ ಯಾರಿಗಾದ್ರು ಡಯಾಬಿಟೀಸ್ ಇದ್ಯಾ?’ ಅಂತ ಕೇಳಿದರು, ಅನುಮಾನದಿಂದ ಕರುಣಾಕರ, ’ ಹೌದು, ನನ್ನ ಅಜ್ಜನಿಗಿತ್ತು, ತಂದೆಗೂ ಇದೆ..ಯಾಕೆ?’ ಎಂದು ಕೇಳಿದ. ’ಹಾಗೇನಿಲ್ಲಾ, ಜಸ್ಟ್ ಹೀಗೇ ಕೇಳಿದೆ, ಏನಿಲ್ಲಾ ನಿಮ್ಮ ಶುಗರ್ ಲೆವೆಲ್ ಸ್ವಲ್ಪ ಹೈ ಇದೆ.. ಗಾಬರಿ ಮಾಡುವಂತದ್ದೇನೂ ಇಲ್ಲ, ಏನಕ್ಕೂ ನೀವು ನಾಳೆ ಎಫ಼್.ಬಿ.ಎಸ್. ಒಂದು ಮಾಡಿಸಿಬಿಡಿ.. ಬೇಡಾ ಅಂದ್ರೆ ಬೇಡ ’ ಅಂದರು ಡಾಕ್ಟ್ರ್, ’ಆಯ್ತು’ ಅಂದವನ ದನಿ ನಡುಗುತ್ತಿತ್ತು.. ’ ಚೇ, ಚೇ ವರ್ರಿ ಮಾಡ್ಬೇಡ್ರಿ, ನಾಳೆ ಖಾಲಿ ಹೊಟ್ಟೆಲಿ ಬನ್ನಿ..’ ಅನ್ನುತ್ತಾ, ಅವರು ಬೆನ್ನು ತಟ್ಟಿದರು, ಮುಖದ ಮೇಲೆ ನಗು ಬರಿಸುತ್ತಾ ಹೊರಬಂದವನಿಗೆ, ಫ಼ುಲ್ ಟೆನ್ ಷನ್; ಹಸಿವಾಗುತ್ತದೆ ಅಂತ ಹೋಟೆಲ್ ಗೆ ಹೋದ್ರೆ ’ ಅದು ತಿನ್ನಬಹುದಾ? ಇದು ತಿನ್ನಬಹುದಾ?’ ಎಂಬ ಅನುಮಾನ; ಏನು ಮಾಡಲೂ ತೋಚದೆ ಎರಡು ದಿನ ರಜೆ ಹಾಕಿದ, ಸಂಜೆ ವೀಣಾ ಜೊತೆ ಮಾತಾಡೋವಾಗ, ’ ನಂಗೇನಾದ್ರೂ ಖಾಯಿಲೆ ಇದ್ರೆ ನನ್ನ ಒಪ್ಕೋತೀಯಾ?’ ಎಂದು ಕೇಳಿದ, ’ ಏನು ಮಾತಾಡ್ತಿದಿಯ? ಏನಾಯ್ತು ಹೇಳು? ’ ಎಂಬ ಅವಳ ಅನುನಯದ ಮಾತುಗಳ, ’ಸುಮ್ಮನೆ ಕೇಳಿದೆ..’ ಎಂದು ಹಾರಿಸಿದ. ’ಇನ್ನು ಹೀಗೆಲ್ಲಾ ಮಾತಾಡಿದ್ರೆ ನೋಡು..’ ಅಂದದಕ್ಕೆ, ಸುಮ್ಮನೆ ’ಹೂಂ’ಗುಟ್ಟಿದ.
ಕರುಣಾಕರ ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಡ್ ಕೊಟ್ಟು ಬಂದವನಿಗೆ, ರಿಪೋರ್ಟ್ ಬರುವವರೆಗೆ ’ಅಯ್ಯಯ್ಯೋ’ ಎಂದು ಮೈ ಪರಚಿಕೊಳ್ಳುವಂತಾಗಿತ್ತು; ರಿಪೋರ್ಟ್ ಹಿಡಿದು ಡಾಕ್ಟ್ರ್ ಬಳಿ ಹೋಗಿ ತೋರಿಸಿದ, ’ ’ವಾಹ್! ಯೂ ಆರ್ ಪರ್ಫ಼ೇಕ್ಟ್ಲೀ ಆಲ್ ರೈಟ್ ಯಂಗ್ ಮ್ಯಾನ್...’ ಅನ್ನುತ್ತಾ ಡಾಕ್ಟ್ರು ಕರುಣಾಕರನ ಬೆನ್ನು ತಟ್ಟಿದರು.
ನಿರಾಳವಾಗಿ ಹೊರ ಬಂದವನಿಗೆ, ಈ ವಿಷಯವನ್ನು ವೀಣಾಗೆ ಹೇಳೋದು ಬೇಡ, ಅಟ್ ಲೀಸ್ಟ್ ಇದೊಂದಾದರು ಗುಟ್ಟು ತನ್ನಲ್ಲಿರಲಿ ಅನಿಸಿತು; ಆಗ ತಾನು ಇನ್ನೂ ಜೀವಂತವಾಗಿರಬಹುದು ಅಂತನಿಸಿತು, ವೀಣಾಗೆ ’ಹಾಯ್..’ ಎಂದು ಮೆಸೇಜು ಮಾಡಿದರೆ ಅವಳ ಕಾಲ್! ’ನಿನ್ನೆ ರಾತ್ರಿ ಪೂರಾ ನಂಗೆ ನಿದ್ದೆ ಇಲ್ಲ ಗೊತ್ತಾ? ನಿಂಗೇನಾಗಿದೆ? ಯಾಕೆ ಹೀಗೆ ಬಿಹೇವ್ ಮಾಡ್ತಾ ಇದೀಯಾ?’ ಅಂದವಳ ಧಾವಂತಕ್ಕೆ, ಏನು ಹೇಳಲೂ ತೋಚದೆ, ’ ಅದೂ ನಿನ್ನೆ ಬ್ಲಡ್ ಟೆಸ್ಟ್ ಮಾಡ್ಸಿದ್ದೆ, ಶುಗರ್ ಹೈ ಬಂತು. ಈಗ ಪುನಃ ಚೆಕ್ ಮಾಡ್ಸಿದೆ, ನಾರ್ಮಲ್ ಅಂತ ಗೊತ್ತಾಯ್ತು’ ಅಂದ. ವೀಣಾನ ’ ನಂಗ್ಯಾಕೆ ಮೊದಲೇ ಹೇಳ್ಲಿಲ್ಲ? ನಾನು ಅಷ್ಟೂ ಬೇಡವಾದ್ನಾ ನಿಂಗೆ?’ ಇತ್ಯಾದಿಗಳಿಗೆ ಸಮಾಧಾನ ಹೇಳಿ, ವಾಪಾಸ್ ರೂಮಿಗೆ ಹೊರಟ ಕರುಣಾಕರನಿಗೆ, ಕಮಿಟ್ ಆದ ಮೇಲೆ ತನ್ನದೂ ಅನ್ನೋದು ಏನೂ ಒಳಗೆ ಉಳಿಯೊಲ್ವಾ? ಅಂತ ಪ್ರಶ್ನೆ ಉಧ್ಭವಿಸಿತು; ಬಹುಶ ಇನ್ಯಾವತ್ತೊ ತಾನು ಕಲ್ಲಡ್ಕದ ಆ ನೆನಪನ್ನೂ ಹೇಳಿಬಿಡ್ತೀನಿ ಎಂದು ಖಾತರಿಯಾಯ್ತು, ’ಅದೆಲ್ಲಾ ಯಾಕೆ ಈಗ’ ಎಂಬ ಭಾವವೂ ಮೂಡಿ, ವೀಣಾ ಕಳಿಸಿದ್ದ,’ಲವ್ ಯು’ ಮೆಸೇಜ್ ನೋಡಿ, ಸುಮ್ಮನೆ ’ ಲವ್ ಯು, ಟೇಕ್ ಕೇರ್ ’ ಅಂತ ಟೈಪ್ ಮಾಡಿ ಸೆಂಡ್ ಒತ್ತಿದ.

ಣತಲ್ಲ


ತಲ್ಲಣ


ತನ್ನ ಬೆನ್ನನ್ನು ಗಟ್ಟಿಯಾಗಿ ಅವಿಚಿಕೊಂಡಿದ್ದ ವೀಣಾಳ ಸ್ಪರ್ಶದ ಪುಳಕವನ್ನು ಅನುಭವಿಸುತ್ತಾ ಪುತ್ತೂರಿಂದ ಮಂಗಳೂರಿಗೆ ಬೈಕಲ್ಲಿ ರಭಸವಾಗಿ  ಹೋಗುತ್ತಿದ್ದ ಕರುಣಾಕರ, ಕಲ್ಲಡ್ಕ ಬರುತ್ತಿದ್ದಂತೆ ಯಾಕೋ ಅಸ್ವಸ್ಥನಾದ, ತಾನು ಚಿಕ್ಕವನಿದ್ದಾಗ  ಕಾಲುನೋವಿನಿಂದ ನರಳುತ್ತಿದ್ದಾಗ, ಕಡೆಶ್ವಾಲ್ಯದಲ್ಲಿ ಯಾರೋ ದೊಡ್ಡ ಡಾಕ್ಟ್ರಿದ್ದಾರೆ ಅಂತ ತನ್ನನ್ನು ಕರಕೊಂಡು ಅಮ್ಮ ಬಸ್ಸಿಗಾಗಿ ಕಾದ ಜಾಗ ಇದು ಅಂತ ಹೊಳೆದು, ಅದಕ್ಕೂ ಈಗಾಗೋದಕ್ಕೂ ಏನು ಸಂಬಂಧ ಎಂದು ಯೋಚಿಸತೊಡಗಿದ. ಅದು ಅಷ್ಟು ಸ್ಪಷ್ಟವಾಗಿ ಮನದಲ್ಲಿ ಅಚ್ಚೊತ್ತಿರಲು ಕಾರಣ, ಆ ದಿನ ಬಸ್ಸು ಅರ್ಧ ಗಂಟೆ ತಡವಾಗಿ ಬಂದಿತ್ತು ಮತ್ತು ಆ ಅರ್ಧ ಗಂಟೆಯೂ ತಾನು ’ಕುಂಯಿ...’ ಎಂದು ರಾಗ ಎಳೆಯುತ್ತಾ ಅಳುತ್ತಿದ್ದ; ಆಗ ಅಲ್ಲಿದ್ದವರ ಕುತೂಹಲದ ಕಣ್ಣುಗಳಿಗೆ, ತನ್ನನ್ನು ಸಮಾಧಾನ ಮಾಡಲೂ ಆಗದೆ ಅಮ್ಮ ಮುಜುಗರದಿಂದ ನಿಂತದ್ದು ನೆನಪಾಯಿತು. ಅಷ್ಟರಲ್ಲಿ ’ಲಕ್ಷ್ಮೀ ನಿವಾಸ’ ಹೋಟೆಲ್ ಬಂತು. ಕಲ್ಲಡ್ಕ ಟೀ ಕುಡಿಯೋಣ ಅಂತ ಬೈಕ್ ನಿಲ್ಲಿಸಿದವನಿಗೆ ವೀಣಾಗೆ ಇದನ್ನೆಲ್ಲ ಹೇಳೋದೋ, ಬೇಡವೋ ಎಂಬ ಗೊಂದಲಕ್ಕೆ ಬಿದ್ದ; ’ನಮ್ಮ ನಡುವೆ ಯಾವುದೇ ಸೀಕ್ರೆಟ್ಸ್ ಇರಬಾರದು, ನಾವಿಬ್ಬರು ಸೋಲ್ ಮೇಟ್ಸ್ ಅಂತ ಇಬ್ರೂ ಮಾಡಿದ್ದ ಪ್ರಾಮಿಸ್ ಗಳೆಲ್ಲ ನೆನಪಾಯಿತು. ತಾನು ಚಡ್ಡಿ ಹಾಕಿಕೊಂಡು  ಶಾಲೆಗೆ ಹೋಗುತ್ತಿದ್ದಾಗ ಎರಡು ಮನೆ ಆಚೆಯ ಹುಡುಗಿಗೆ ಕಾದು ನಿಂತು, ಇದು ಉದ್ದೇಶಪೂರ್ವಕ ಅಂತ ತಿಳಿಯದಂತೆ ಅವಳ ಹಿಂದೆ ಹೋಗುತ್ತಿದ್ದುದು, ಅಪ್ಪನ ಸಹಿ ರಿಪೋರ್ಟ್ ಕಾರ್ಡ್ ನಲ್ಲಿ ಪೋರ್ಜರಿ ಮಾಡಿದ್ದು, ಎಲ್ಲಾ ಹೇಳಿಕೊಂಡು ಅವಳ ಕೀಟಲೆಗೆ, ನಗುವಿಗೆ ವಸ್ತುವಾಗಿದ್ದ; ಆದರೆ ಈಗ ಇದನ್ನು ಹೇಳೋದು ಬೇಡ ಅಂತನಿಸಿತು. ಸುಮ್ಮನೆ ಕೆ.ಟಿ. ಆರ್ಡರ್ ಮಾಡಿ, ಅವಳ ಕಣ್ಣನ್ನೇ ನೋಡುತ್ತಾ ಕುಳಿತವನಿಗೆ, ನನಗೇ ಅಂತ ಕೆಲವು ರಹಸ್ಯಗಳು ಬೇಕು ಅಂತನ್ನಿಸಿತು; ಅಂಥಾ ಭಾರಿ ಅಲ್ಲದ, ಆದರೂ ತನಗೆ ಮಾತ್ರ ಗೊತ್ತಿರುವುದು ಅಂದುಕೊಳ್ಳುವಾಗ ಖುಶಿ ತರುವವು. ಆದರೆ ಪರಿಚಯ ಪ್ರೀತಿಗೆ ತಿರುಗಿದ ಗಳಿಗೆಗಳಲ್ಲಿ, ತನ್ನದೆಲ್ಲವನ್ನೂ ಹೇಳಿಬಿಡಬೇಕು ಅನ್ನುವ ಆತುರಕ್ಕೆ ಸಿಕ್ಕಿ, ಖಾಲಿಯಾಗಿ ಈಗ ಉಳಿದಿರುವುದು ಬರೀ ಇಂಥವೇ ಒಂದೆರಡು ಮರೆತಂಥ ನೆನಪುಗಳು ಮಾತ್ರ; ವೀಣಾಗೆ ಮಾತ್ರ ಅಂಥದ್ದೇನೂ ಅನಿಸಿರಲಿಲ್ಲ, ಅವಳು ಚಿಕ್ಕವಳಿದ್ದಾಗ ಮನೆ ಜಗಲಿಯಿಂದ ಕೆಳಗೆ ಜಿಗಿದು ಆಡುತ್ತಿದ್ದರಿಂದ ಹಿಡಿದು, ಹಾಗೊಮ್ಮೆ ಜಿಗಿದಾಗ ಮನೆ ಪಕ್ಕದ ಚರಂಡಿಗೆ ಬಿದ್ದದ್ದು ಕೂಡ ಯಾವುದೇ ಮುಜುಗರವಿಲ್ಲದೆ ಹೇಳಿದ್ದಳು; ಹೈ ಸ್ಕೂಲ್ ಓದೋವಾಗ ಯಾವನೋ ಉದ್ದ ಕೂದಲ ಹುಡುಗ ತುಂಬಾ ಇಷ್ಟವಾಗಿದ್ದು ಹೇಳಿ ಬಾಯಿ ತುಂಬ ನಕ್ಕಿದ್ದಳು. ಆದರಲ್ಲಿ ಅರಗಿಸಿಕೊಳ್ಳೊದಾದರೆ ಅರಗಿಸಿಕೊ, ನನ್ನ ಭಾರವಂತೂ ಇಳಿಯಿತು ಎಂಬ ನಿರುಮ್ಮಳ ಭಾವ ಕಂಡಿತ್ತು ಕರುಣಾಕರನಿಗೆ. ಇಷ್ಟು ವರ್ಷಗಳಿಂದ ತನ್ನ ಅರಿಯದ ಜೀವವೊಂದು ಹಠಾತ್ತಾಗಿ ಎಂಬಂತೆ ಪರಿಚಯವಾಗಿ ಪ್ರೀತಿ ಶುರುವಾದಂತೆ ತನ್ನ ಗುಟ್ಟುಗಳ ಹೇಳುವ ಪರಿ ಅವನಿಗೆ ಆಶ್ಚರ್ಯ ತಂದಿತ್ತು. ಕರುಣಾಕರನಿಗೆ ಏನು ಹೇಳಲೂ ತೋಚದೆ, ಆರ್ಡರ್ ಮಾಡಿದ ಟೀ ಬರುವಷ್ಟು ಹೊತ್ತು, ಕಂಪೆನಿ ಬಗ್ಗೆ, ಅಲ್ಲಿನ ಜಗಳಗಳ ಬಗ್ಗೆ, ಮೇಲಿನವರಿಗೆ ಮಾಡುವ ಬಟರಿಂಗ್ ಬಗ್ಗೆ ಹೇಳುತ್ತಾ ಹೋದ; ವೀಣಾ ಆಸಕ್ತಿಯಿಂದ ಕೇಳುತ್ತಿದ್ದಳು. ಯಾಕೋ ಇದೆಲ್ಲಾ ಸುಮ್ಮನೇ ಅಂತನ್ನಿಸಿ, ತಾನು ಹೇಳುತ್ತಿದ್ದ ಅಸಂಬದ್ದವನ್ನು ಅಲ್ಲಿಗೇ ನಿಲ್ಲಿಸಿ ಕರುಣಾಕರ ಅವಳ ಮುಖವನ್ನು ನೋಡತೊಡಗಿದ; ’ ಇನ್ನೊಂದು ವರ್ಷದೊಳಗೆ ಮನೇಲಿ ಹೇಳ್ಬೇಕು..’ ಕ್ಯಾಶುವಲ್ ಆಗಿ ಎಂಬಂತೆ ಹೇಳಿ, ವೀಣಾ ನಕ್ಕಳು.
ಯಾಕೋ ಮತ್ತೆ ಬಾಯಾರಿಕೆ ಜಾಸ್ತಿಯಾದಂತಾಯಿತು ಕರುಣಾಕರನಿಗೆ, ಕಳೆದೊಂದು ವಾರದಿಂದ ಭಯಂಕರ ಹಸಿವು ಬೇರೆ; ವೀಣಾಗೆ ಹೇಳಿದ್ರೆ ತಿಂಡಿಪೋತ ಅಂದು ರೇಗಿಸ್ತಾಳೆ ಅಂತ ಹೇಳಿರಲಿಲ್ಲ, ಟೀ ಕುಡಿದು, ಬಿಲ್ಲು ಕೊಟ್ಟು ಹೊರಬಂದವನಿಗೆ ಯಾಕೋ ಏನೋ ಸರಿ ಇಲ್ಲ ಅನಿಸತೊಡಗಿತು; ಸುಮ್ಮನೆ ಬೈಕನ್ನು ಓಡಿಸಿದ ಮಂಗಳೂರತ್ತ, ವೀಣಾಳನ್ನ ಅವಳ ರೂಮ್ ಹತ್ತಿರ ಇಳಿಸಿ,’ಮೆಸೇಜ್ ಮಾಡ್ತೀನಿ’ ಅಂತಂದು ’ಬಾಯ್’ ಹೇಳಿ, ತನ್ನ ರೂಮಿಗೆ ಬಂದವನಿಗೆ ತೀರ ಸುಸ್ತೆನಿಸತೊಡಗಿತು, ನೈಟ್ ಡ್ಯೂಟಿಗೆ ರಜೆ ಮಾಡಿ ಬಿದ್ದುಕೊಂಡ, ವೀಣಾಳ ಮೆಸೇಜಿಗೆ ಉತ್ತರಿಸಲೂ ಉದಾಸೀನವೆನಿಸಿತು..
ಮರುದಿನ ಡಾಕ್ಟ್ರ ಶಾಪ್ ಗೆ ಹೋಗಿ ಕಾಯುತ್ತಿದ್ದಾಗ, ತಾನಿನ್ನೂ ಈ ವಿಷಯವನ್ನು ವೀಣಾಗೆ ಹೇಳಿಲ್ಲ ಎಂದು ನೆನಪಾಗಿ, ಆಮೇಲೆ ಹೇಳಿದರಾಯ್ತು ಅಂದುಕೊಂಡ. ಡಾಕ್ಟ್ರು ಕರುಣಾಕರನ ಪರೀಕ್ಷೆ ಮಾಡಿ, ಸಿಮ್ಟಮ್ಸ್ ಕೇಳಿ, ’ ನೀವೊಂದ್ಸಲ ’ಆರ್.ಬಿ.ಯೆಸ್.’ ಮಾಡ್ಸಿ.ಸುಮ್ನೆ ಶುಗರ್ ಲೆವೆಲ್ ಚೆಕ್ ಮಾಡ್ಬಿಡೋಣ’ ಎಂದು ಅವನನ್ನು ಕಳಿಸಿದರು, ಅವರ ಮಾತಿನ ಧಾಟಿ, ಹಾವ ಭಾವ, ಎಲ್ಲಾ ಯಾವುದೋ ಒಂದರತ್ತ ಬೆಟ್ಟು ಮಾಡುತ್ತಿರುವಂತೆ ಅನ್ನಿಸಿ ಕರುಣಾಕರನಿಗೆ ಭಯ ಶುರುವಾಯಿತು; ವೀಣಾ ಬಳಿ ಇದನ್ನೆಲ್ಲ ಹಂಚಿಕೊಳ್ಳಬೇಕು ಎಂದು ಫೋನೆತ್ತಿದವನು ಯಾಕೋ ಸುಮ್ಮನಾದ, ಆತಂಕದಲ್ಲಿದ್ದಾಗ ,’ ಏನೂ ಇಲ್ಲ ಡಿಯರ್, ನೀನು ವರ್ರಿ ಮಾಡ್ಕೋಬೇಡ..’ ಅನ್ನುವ ಅವಳ ಸಮಾಧಾನದ ಮಾತುಗಳು, ಕಿರಿಕಿರಿಯುಂಟು ಮಾಡುತ್ತೆ ಅನಿಸಿತು. ಟೆಸ್ಟಿಗೆ ಬ್ಲಡ್ ಕೊಟ್ಟು ’ ಒಂದು ಗಂಟೆ ವೈಯ್ಟ್ ಮಾಡಿ ಸಾರ್..’ ಎಂಬ ಉತ್ತರ ಪಡೆದು, ಕಾಯುತ್ತಾ ಕುಳಿತವನಿಗೆ, ಈ ಜಗತ್ತಲ್ಲಿ ತನ್ನನ್ನು ಬಿಟ್ಟು ಎಲ್ಲರೂ ಸುಖವಾಗಿದ್ದಾರೆ ಅಂತ ಗಾಢವಾಗಿ ಅನ್ನಿಸಿತು. ಹಾಗೆ ಯೊಚಿಸುತ್ತಿದ್ದಾಗಲೇ ರಿಪೋರ್ಟ್ ಬಂತು; ಅದನ್ನು ಹಿಡಿದುಕೊಂಡು ಡಾಕ್ಟ್ರ್ ಬಳಿ ಹೋದ; ರಿಪೋರ್ಟ್ ಓದಿ ಡಾಕ್ಟ್ರ್ ’ಒಳಗೆ ಬನ್ನಿ’ ಎಂದು ಇನ್ನೊಂದು ಕೋಣೆಗೆ ಕರೆದುಕೊಂಡು ಹೋದಾಗ, ಕರುಣಾಕರನಿಗೆ ಆತಂಕವಾಗತೊಡಗಿತು; ಅವರು ಮೆಲ್ಲನೆ ತಗ್ಗಿದ ದನಿಯಲ್ಲಿ,’ ನೋಡಿ, ನಿಮ್ಮ ಫ಼್ಯಾಮಿಲಿಲಿ ಯಾರಿಗಾದ್ರು ಡಯಾಬಿಟೀಸ್ ಇದ್ಯಾ?’ ಅಂತ ಕೇಳಿದರು, ಅನುಮಾನದಿಂದ ಕರುಣಾಕರ, ’ ಹೌದು, ನನ್ನ ಅಜ್ಜನಿಗಿತ್ತು, ತಂದೆಗೂ ಇದೆ..ಯಾಕೆ?’ ಎಂದು ಕೇಳಿದ. ’ಹಾಗೇನಿಲ್ಲಾ, ಜಸ್ಟ್ ಹೀಗೇ ಕೇಳಿದೆ, ಏನಿಲ್ಲಾ ನಿಮ್ಮ ಶುಗರ್ ಲೆವೆಲ್ ಸ್ವಲ್ಪ ಹೈ ಇದೆ.. ಗಾಬರಿ ಮಾಡುವಂತದ್ದೇನೂ ಇಲ್ಲ, ಏನಕ್ಕೂ ನೀವು ನಾಳೆ ಎಫ಼್.ಬಿ.ಎಸ್. ಒಂದು ಮಾಡಿಸಿಬಿಡಿ.. ಬೇಡಾ ಅಂದ್ರೆ ಬೇಡ ’ ಅಂದರು ಡಾಕ್ಟ್ರ್, ’ಆಯ್ತು’ ಅಂದವನ ದನಿ ನಡುಗುತ್ತಿತ್ತು.. ’ ಚೇ, ಚೇ ವರ್ರಿ ಮಾಡ್ಬೇಡ್ರಿ, ನಾಳೆ ಖಾಲಿ ಹೊಟ್ಟೆಲಿ ಬನ್ನಿ..’ ಅನ್ನುತ್ತಾ, ಅವರು ಬೆನ್ನು ತಟ್ಟಿದರು, ಮುಖದ ಮೇಲೆ ನಗು ಬರಿಸುತ್ತಾ ಹೊರಬಂದವನಿಗೆ, ಫ಼ುಲ್ ಟೆನ್ ಷನ್; ಹಸಿವಾಗುತ್ತದೆ ಅಂತ ಹೋಟೆಲ್ ಗೆ ಹೋದ್ರೆ ’ ಅದು ತಿನ್ನಬಹುದಾ? ಇದು ತಿನ್ನಬಹುದಾ?’ ಎಂಬ ಅನುಮಾನ; ಏನು ಮಾಡಲೂ ತೋಚದೆ ಎರಡು ದಿನ ರಜೆ ಹಾಕಿದ, ಸಂಜೆ ವೀಣಾ ಜೊತೆ ಮಾತಾಡೋವಾಗ, ’ ನಂಗೇನಾದ್ರೂ ಖಾಯಿಲೆ ಇದ್ರೆ ನನ್ನ  ಒಪ್ಕೋತೀಯಾ?’ ಎಂದು ಕೇಳಿದ, ’ ಏನು ಮಾತಾಡ್ತಿದಿಯ? ಏನಾಯ್ತು ಹೇಳು? ’ ಎಂಬ ಅವಳ ಅನುನಯದ ಮಾತುಗಳ, ’ಸುಮ್ಮನೆ ಕೇಳಿದೆ..’ ಎಂದು ಹಾರಿಸಿದ. ’ಇನ್ನು ಹೀಗೆಲ್ಲಾ ಮಾತಾಡಿದ್ರೆ ನೋಡು..’ ಅಂದದಕ್ಕೆ, ಸುಮ್ಮನೆ ’ಹೂಂ’ಗುಟ್ಟಿದ.
 ಕರುಣಾಕರ ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಡ್ ಕೊಟ್ಟು ಬಂದವನಿಗೆ, ರಿಪೋರ್ಟ್ ಬರುವವರೆಗೆ ’ಅಯ್ಯಯ್ಯೋ’ ಎಂದು ಮೈ ಪರಚಿಕೊಳ್ಳುವಂತಾಗಿತ್ತು; ರಿಪೋರ್ಟ್ ಹಿಡಿದು ಡಾಕ್ಟ್ರ್ ಬಳಿ ಹೋಗಿ ತೋರಿಸಿದ, ’ ’ವಾಹ್! ಯೂ ಆರ್ ಪರ್ಫ಼ೇಕ್ಟ್ಲೀ ಆಲ್ ರೈಟ್ ಯಂಗ್ ಮ್ಯಾನ್...’ ಅನ್ನುತ್ತಾ ಡಾಕ್ಟ್ರು ಕರುಣಾಕರನ ಬೆನ್ನು ತಟ್ಟಿದರು.
ನಿರಾಳವಾಗಿ ಹೊರ ಬಂದವನಿಗೆ, ಈ ವಿಷಯವನ್ನು ವೀಣಾಗೆ ಹೇಳೋದು ಬೇಡ, ಅಟ್ ಲೀಸ್ಟ್ ಇದೊಂದಾದರು ಗುಟ್ಟು ತನ್ನಲ್ಲಿರಲಿ ಅನಿಸಿತು; ಆಗ ತಾನು ಇನ್ನೂ ಜೀವಂತವಾಗಿರಬಹುದು ಅಂತನಿಸಿತು, ವೀಣಾಗೆ ’ಹಾಯ್..’ ಎಂದು ಮೆಸೇಜು ಮಾಡಿದರೆ ಅವಳ ಕಾಲ್!  ’ನಿನ್ನೆ ರಾತ್ರಿ ಪೂರಾ ನಂಗೆ ನಿದ್ದೆ ಇಲ್ಲ ಗೊತ್ತಾ? ನಿಂಗೇನಾಗಿದೆ? ಯಾಕೆ ಹೀಗೆ ಬಿಹೇವ್ ಮಾಡ್ತಾ ಇದೀಯಾ?’ ಅಂದವಳ ಧಾವಂತಕ್ಕೆ, ಏನು ಹೇಳಲೂ ತೋಚದೆ, ’ ಅದೂ ನಿನ್ನೆ ಬ್ಲಡ್ ಟೆಸ್ಟ್ ಮಾಡ್ಸಿದ್ದೆ, ಶುಗರ್ ಹೈ ಬಂತು. ಈಗ ಪುನಃ ಚೆಕ್ ಮಾಡ್ಸಿದೆ, ನಾರ್ಮಲ್ ಅಂತ ಗೊತ್ತಾಯ್ತು’ ಅಂದ. ವೀಣಾನ ’ ನಂಗ್ಯಾಕೆ ಮೊದಲೇ ಹೇಳ್ಲಿಲ್ಲ? ನಾನು ಅಷ್ಟೂ ಬೇಡವಾದ್ನಾ ನಿಂಗೆ?’ ಇತ್ಯಾದಿಗಳಿಗೆ ಸಮಾಧಾನ ಹೇಳಿ, ವಾಪಾಸ್ ರೂಮಿಗೆ ಹೊರಟ ಕರುಣಾಕರನಿಗೆ, ಕಮಿಟ್ ಆದ ಮೇಲೆ ತನ್ನದೂ ಅನ್ನೋದು ಏನೂ ಒಳಗೆ ಉಳಿಯೊಲ್ವಾ? ಅಂತ ಪ್ರಶ್ನೆ ಉಧ್ಭವಿಸಿತು; ಬಹುಶ ಇನ್ಯಾವತ್ತೊ ತಾನು ಕಲ್ಲಡ್ಕದ ಆ ನೆನಪನ್ನೂ ಹೇಳಿಬಿಡ್ತೀನಿ ಎಂದು ಖಾತರಿಯಾಯ್ತು, ’ಅದೆಲ್ಲಾ ಯಾಕೆ ಈಗ’ ಎಂಬ ಭಾವವೂ ಮೂಡಿ, ವೀಣಾ ಕಳಿಸಿದ್ದ,’ಲವ್  ಯು’ ಮೆಸೇಜ್ ನೋಡಿ, ಸುಮ್ಮನೆ ’ ಲವ್ ಯು, ಟೇಕ್ ಕೇರ್ ’ ಅಂತ ಟೈಪ್ ಮಾಡಿ ಸೆಂಡ್ ಒತ್ತಿದ.    

Thursday, June 2, 2011

ನನ್ನೊಳಗಿನ ಕೇರಳ...

                                            

ಚಿರಪರಿಚಿತ ರೈಲಿನ 'ಧಡ್,ಧಡ್' ಶಬ್ದ ಹತ್ತಿರವಾದಂತೆ ಏನೋ ತಳಮಳ ಶುರುವಾಯಿತು; ನೆನಪು ತಕ್ಷಣ ಬಾಲ್ಯದತ್ತ ಮಗುಚಿಕೊಂಡಿತು. ಕೇರಳ! ನನ್ನ ತಾಯಿಯ ತಂದೆ ಮನೆ; ನಾನು ಹುಟ್ಟಿದೂರು. ಪ್ರತೀ ವರ್ಷ ಶಾಲೆಯ ರಜಾದಿನಗಳಲ್ಲಿ ಅಮ್ಮನ ಸೆರಗು ಹಿಡಿದುಕೊಂಡೋ, ಅಪ್ಪನ ಹೆಗಲಿಗೆ ಜೋತುಕೊಂಡೋ ಹೋಗಿ ಹತ್ತಿಪ್ಪತ್ತು ದಿವಸ ಅಲ್ಲಿ ಮೆರೆದು, ವಾಪಸ್ ಬರೋವಾಗ 'ಅಯ್ಯಯ್ಯೋ, ಶಾಲೆ ಶುರುವಾಯಿತಲ್ಲ' ಎಂಬ ಗಾಢ ವಿಷಾದವನ್ನೂ, 'ಇನ್ಯಾವಾಗ ನೋಡೋದು' ಎಂಬ ಬೇಜಾರನ್ನೂ ಉಳಿಸುತ್ತಿತ್ತು. ಆಗ ಮಕ್ಕಳಾದ ಕಾರಣ 'ಹೋ...' ಎಂದು ಅಳಲು ಯಾವ ಕಟ್ಟುಪಾಡೂ ಇರಲಿಲ್ಲವಲ್ಲ. ಶಾಲೆಯ ದಿನಗಳಲ್ಲೂ ಆವಾಗೊಮ್ಮೆ,ಈವಾಗೊಮ್ಮೆ ನೆನಪಾಗಿ ಮುಂದಿನ ರಜೆಗೋಸ್ಕರ ಕಾದು ಕೂರುವಂತೆ ಮಾಡುತ್ತಿತ್ತು.
ಸ್ಟೇಷನ್ ಹತ್ತಿರವಾದಂತೆ ರೈಲು ನಿಧಾನವಾಗುತ್ತಾ ಕೊನೆಗೊಮ್ಮೆ 'ಕ್ರೀಚ್...' ಅಂತ ನಿಟ್ಟುಸಿರು ಬಿಡುತ್ತಾ ಸ್ತಬ್ಧವಾಯಿತು; ಬೇಗ ಬೇಗನೇ ನಾನೂ, ಅಮ್ಮನೂ ನಮ್ಮ ಲಗೇಜನ್ನು ಹೊತ್ತುಕೊಂಡು ಅತ್ತಿತ್ತ ಓಡಾಡುತ್ತಾ ಕಂಪಾರ್ಟ್ಮೆಂಟ್ ಹುಡುಕಿ, ಗಡಿಬಿಡಿಯಲ್ಲಿ ಹತ್ತಿ ನಮ್ಮ ಸೀಟ್ ನಂಬರ್ ನೋಡಿಕೊಂಡು, ಎರಡೆರಡು ಸಲ ಕನ್ಫರ್ಮ್ ಮಾಡಿಕೊಂಡು, ನಿರಾಳವಾಗಿ ಸೀಟಲ್ಲಿ ಕೂತು, ಲಗೇಜನ್ನು ಸೀಟಿನಡಿ ನೂಕಿ, 'ಉಸ್ಸಪ್ಪಾ..' ಎಂದು ರೈಲು ಹೊರಡುವುದನ್ನು ಕಾಯತೊಡಗಿದೆವು. ರೈಲು ಸ್ಟೇಷನ್ ಬಿಟ್ಟೊಡಲು ಶುರುವಿಡುತ್ತಿದ್ದಂತೆ, ಕಿಟಕಿಯ ಸರಳಿಗೆ ಮುಖವನ್ನಂಟಿಸಿಕೊಂಡು ಆ ತುಕ್ಕು ಹಿಡಿದ ಕಬ್ಬಿಣದ ವಾಸನೆಯನ್ನು ಆಸ್ವಾದಿಸುತ್ತಾ ನನ್ನೊಳಗೆ ಸಿದ್ಧನಾಗತೊಡಗಿದೆ.
ಕಾಸರಗೋಡಿನಿಂದ ಸರಿಸುಮಾರು ಮುನ್ನೂರು ಕಿಲೋಮೀಟರ್ ಗಳ ಹಾದಿ ಪಾಲಕ್ಕಾಡ್ ಗೆ; ಏಳರಿಂದ ಎಂಟು ಗಂಟೆಗಳ ಪ್ರಯಾಣ. ಬೆಳಗಿನ ಹಾದಿಯಾದರೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರೆ, ಕಣ್ಣೆದುರು ಸಿನೆಮಾ ಓಡುವಂತೆ ಮಿಂಚಿ ಮಾಯವಾಗುವ ಜನ ಜೀವನ; ರಾತ್ರಿ ಯಾನವಾದರೆ ರೈಲಿನ ಲಯಬದ್ಧ ತಾಳಕ್ಕೆ ಸಾಥ್ ನೀಡುವ ಹೊರಗಿನ ಕತ್ತಲು,ಮಂದ ದೀಪ, 'ಚಾಯ್,ಕಾಫಿ' ಗಳ ಆಲಾಪ ಎಲ್ಲಾ ಸೇರಿ, ಅತ್ತ ನಿದ್ದೆಯೂ ಅಲ್ಲದ ಇತ್ತ ಎಚ್ಚರಿಕೆಯೂ ಅಲ್ಲದ ನಿಗೂಢ ಮಾಯಾಲೋಕ!
ಚಿಕ್ಕವನಿದ್ದಾಗ ಪ್ರತೀ ಬಾರಿ ಶಾಲೆಗೆ ರಜೆ ಬಂದಾಗಲೆಲ್ಲಾ ನಾನೂ,ತಂಗಿಯೂ,ಅಮ್ಮನೂ ಆಸೆ ಮತ್ತು ಖುಷಿಯಿಂದ ಕಾಯುತ್ತಿದ್ದೆವು; 'ಯಾವಾಗ ಹೋಗೋದು ಅಮ್ಮ, ಅಜ್ಜಿ ಮನೆಗೇ?' ಅಂತ ನಾವು ರಾಗ ಎಳೆದರೆ, 'ಅಪ್ಪಂಗೆ ರಜೆ ಸಿಗ್ಬೇಕಲ್ಲ ಮೋನು...' ಅಂತ ಅಮ್ಮನ ಸಮಾಧಾನ; ಒಂದು ವೇಳೆ ಅಪ್ಪನಿಗೆ ರಜೆ ಸಿಗದಿದ್ದರೆ, ಅಪ್ಪ ಇಲ್ಲಿಂದ ರೈಲು ಹತ್ತಿಸಿಬಿಡುತ್ತಿದ್ದರು, ಅಲ್ಲಿ ರಿಸೀವ್ ಮಾಡಲು ಮಾವನೋ,ದೊಡ್ಡಪ್ಪನೋ ಸಿದ್ಧವಾಗಿರುತ್ತಿದ್ದ್ರ್‍ಅರು. ನನಗದೆಲ್ಲಾ ಯಾಕೆ ಆಗ? ಅಲ್ಲಿದ್ದ ಅಣ್ಣನ ಜೊತೆ ಮನಸೋ ಇಚ್ಛೆ ಆಡುವ ತವಕದಲ್ಲಿ, ಈ ಕ್ಯಾಲುಕುಲೇಷನ್ ಗಳೆಲ್ಲಾ ಅರ್ಥ ಕಳಕೊಳ್ಳುತ್ತಿದ್ದವು. ಬೆಳಗ್ಗೆ ತಿಂಡಿ ತಿಂದು ಬ್ಯಾಟ್,ಬಾಲ್ ಹಿಡಿದು ಹೊರಟರೆ ನಾವೇ ಬೇರೆ, ನಮ್ಮ ಪ್ರಪಂಚವೇ ಬೇರೆ! ಹೇಗೆಲ್ಲಾ ಮತ್ತು ಎಲ್ಲೆಲ್ಲಾ ಆಡಬಹುದು, ಎಂಬೆಲ್ಲ ಕನಸುಗಳೊಂದಿಗೆ ಅಪ್ಪನ ಕೈ ಹಿಡಿದು ರೈಲು ಹತ್ತಿದರೆ, ರೈಲು ಹೊರಡುವಾಗ ಅಪ್ಪ ದೂರಾಗುತ್ತಾ ಕೊನೆಗೆ ಅಪ್ಪನ 'ಟಾ,ಟಾ' ಮಾಡುವ ಕೈ ಮಾತ್ರ ಕಂಡು ಕೊನೆಗೊಮ್ಮೆ ಅದೂ ಮಾಯವಾಗಿ, ಅಪ್ಪ ಬಂದಿದ್ದರೆ ಎಂಬ ಹಳಹಳಿ; ಯಾಕೆಂದರೆ ಅಪ್ಪ ರೈಲು ಪ್ರತೀ ಸ್ಟೇಷನ್ ನಲ್ಲಿ ನಿಂತಾಗಲೆಲ್ಲಾ ಅದು ಬೇಕಾ? ಇದು ಬೇಕಾ? ಎಂದು ಕೇಳುತ್ತಾ ಹಲ್ವಾ, ಪಳಂಪುರಿ, ಪರಿಪ್ಪು ವಡೆ ಇತ್ಯಾದಿಗಳೊಂದಿಗೆ ಅಪ್ಪನ ಜೀವಜಲ ಚಾ ಬೇರೆ! ವಾಹ್! ಆಗೆಲ್ಲಾ ಅಪ್ಪ ಅಂದರೆ ಸರ್ವಶಕ್ತ! ರೈಲಲ್ಲಿ ಅಪ್ಪ,ಅಮ್ಮನ ಮಧ್ಯೆ ಕೂರಲು ನನಗೂ ತಂಗಿಗೂ ಜಗಳ, ಹಾಗೆ ಕೂತಾಗಲೆಲ್ಲ ಅದೆಂಥ ರಕ್ಷಣಾ ಭಾವ! ಹಾಗೆ ಅಪನ ಬಿಟ್ಟು, ಪೆಚ್ಚು ಮೋರೆಯಲ್ಲಿ ಕೂತು ಎರಡು ಸ್ಟೇಷನ್ ಕಳೆಯುವಾಗ ಮನಸು ರೈಲಿನೊಂದಿಗೆ ಟ್ಯೂನ್ ಆಗಿ, ಆ ಬೇಸರವೆಲ್ಲಾ ಮರೆತು, ಯಾವಾಗ ತಲುಪುತ್ತೇವೋ ಎಂದು ಕಾಯುವಂತಾಗುತಿತ್ತು. ರೈಲು ಪಾಲಕ್ಕಾಡ್ ಸ್ಟೇಷನ್ ತಲುಪುತ್ತಿದ್ದಂತೆ ಚಂಗನೆ ನೆಗೆದು ಅಲ್ಲಿ ನಮ್ಮ ದಾರಿ ಕಾಯುತ್ತಿದ್ದ ದೊಡ್ಡಪ್ಪನ, ಮಾವನ ಮೇಲೆ ಹಾರಿದರಾಯ್ತು, ಆಮೇಲೆ ತಲೆಬಿಸಿ ಇಲ್ಲ. ಅಷ್ಟೇನೂ ಅರ್ಥವಾಗದ ಮಲಯಾಳ ಭಾಷೆ, ಅದರ ಎಳೆದು ಮಾತಾದುವ ರೀತಿ, ಕರಿದ ತಿಂಡಿಗಳ ಪರಿಮಳ, ನೋಡಿದಲ್ಲೆಲ್ಲಾ ಮುಂಡು, ವೇಷ್ಟಿಗಳು ಇವೆಲ್ಲಾ ನನ್ನೊಳಗಿನ ಕೇರಳವನ್ನು ರೂಪಿಸುತ್ತಿದ್ದವು.
ಅಜ್ಜನ ಮನೆಗೆ ತಾಗಿಕೊಂಡಿರುವ ಕೃಷ್ಣ ದೇವಸ್ತಾನ,ಅಲ್ಲಿನ ಕೆರೆ, ದೊಡ್ಡ ದೊಡ್ಡ ಆನೆಗಳು ಎಲ್ಲೋ ದೇವರ ಮೇಲೆ ಭಕ್ತಿಯ ಜೊತೆ ಭಯವನ್ನೂ ತಂದಿತ್ತು; ದಿನಾ ಬೆಳಿಗ್ಗೆ ಎದ್ದ ಕೂಡಲೆ ಸ್ನಾನ ಮಾಡಿ ದೇವಸ್ತಾನಕ್ಕೆ ಸುತ್ತು ಹಾಕಿ ಅಡ್ಡ ಬಿದ್ದು 'ಒಳ್ಳೆ ಬುದ್ಧಿ ಕೊಡು ದೇವರೇ' ಅಂತ ಬೇಡಿಕೊಡು, ತಿಂಡಿ ತಿಂದು, ಸ್ವಲ್ಪ ದೂರದಲ್ಲಿದ್ದ ಅಣ್ಣನ ಫೋನ್ ಮೂಲಕ ಕರೆಸಿ, ನಾವಿಬ್ಬರು ಹೊರಟರೆ ಮುಗಿಯಿತು; ಪ್ರಪಂಚವೇ ಗ್ರೌಂಡ್,ನಾವಿಬ್ಬರು ರೈವಲ್ ಟೀಮ್ಸ್. ಅಲ್ಲಿ ತಾಗಿದರೆ ಎರಡು ರನ್, ಇಲ್ಲಿ ತಾಗಿದರೆ ಫ಼ೋರ್, ಹೊರಗೆ ಕಂಪೌಂಡ್ ದಾಟಿ ಹೋದರೆ ಔಟ್ ಎಂಬಿತ್ಯಾದಿ ಲೆಕ್ಕಾಚಾರ ಮಧ್ಯೆ, ಆಟ ಶುರು ಮಾಡಿ ಯಾಕೋ ಸೋಲುತ್ತಿದ್ದೇನೆ ಅನ್ನಿಸಿದಾಗ ಊಟದ ನೆನಪು; ಮಧ್ಯಾಹ್ನದ ಬಿಸಿಲಿಗೆ ಆಡೋದು ಬೇಡ ಅಂತ ಹುಕುಮ್ ಕೇಳಿಕೊಂಡು ಟಿ.ವಿ. ಆನ್ ಮಾಡಿ ಸುಮ್ಮನೆ ಮ್ಯಾಟಿನಿ ಷೋ ಮೂವ್ ಯಲ್ಲಿಈ  ಮಮ್ಮೂಟ್ಟಿ, ಮೋಹನ್ ಲಾಲ್ ರ ನೋಡುತ್ತಾ ಅವರೆಡೆಗೆ ಮುಗಿಯದ ಆಕರ್ಷಣೆ ಶುರುವಾಯ್ತು ಅನ್ನಿಸುತ್ತದೆ; ಹಾಗೇ ಊರಲ್ಲಿ ಅಪರಿಚಿತವಾಗಿದ್ದ ಥೀಯೇಟರ್ ಗಳು ಇಲ್ಲಿ ವಾರಕ್ಕೊಮ್ದು ಸಲ ಅಮ್ಮ,ಮಾವಂದಿರ ಜೊತೆ ದರ್ಶನ ಭಾಗ್ಯ ಕರುಣಿಸುತ್ತಿದ್ದವು. 
ಸುಮ್ಮನೆ ಅಮ್ಮನ ನಿಟ್ಟಿಸಿದೆ. ಕತ್ತಲಲ್ಲಿ ಮುಖದ ಭಾವ ತಿಳಿಯಲಿಲ್ಲ. ಏನಾಗ್ತಾ ಇರಬಹುದು ಈಗ ಅಮ್ಮನ ಮನಸ್ಸೊಳಗೆ? ನಂಗೆ ಆಗ್ತಾ ಇರೋ ತರಾ ಅಮ್ಮಂಗೂ ಹಳೇ ನೆನಪು ಕಾಡ್ತಾ ಇರಬಹುದಾ? ಮೂರು ದಿನ ಮೊದಲು ವಾರದ ರಜೆ ಅಂತ ಹಾಯಾಗಿ ಮನೇಲಿ ಕಾಲು ಚಾಚಿ ಮಲಗಿರುವಾಗ ಅಮ್ಮ 'ತನ್ನೊಳಗೇ ' ಇನ್ನು ನಾಲ್ಕು ದಿನ ಇದೆ ಊರಿನ ವೇಲೆಗೆ...' ಅಂತಂದಿದ್ದು, ಅಕಸ್ಮಾತ್ ಆಗಿ ಕೇಳಿಸಿ ನನ್ನೊಳಗೆ ಅಪರಾಧಿ ಭಾವ ಹುಟ್ಟು ಹಾಕಿತ್ತು. ನಮಗೆ ಶಾಲೆ ಇರುವ ದಿನಗಳಲ್ಲೇ ಅಲ್ಲಿ ಜಾತ್ರೆ ಇರುತ್ತಿದ್ದ ಕಾರಣ ನನಗೆ ಅಜ್ಜಿ ಮನೆ ಜಾತ್ರೆ ಅಂದರೆ ಅಸ್ಪಷ್ಟ ನೆನಪು ಮಾತ್ರ; ಮತ್ತೇನೂ ಯೋಚಿಸದೆ, ಅಮ್ಮನ ' ಸುಮ್ಮನೆ ಹೇಳಿದೆ.. ಇಲ್ಯಾರು ನೋಡ್ಕೋತಾರೆ...' ಗಳನ್ನೆಲ್ಲಾ ಲೆಕ್ಕಿಸದೆ, ಹೊರಡಿಸಿದೆ. ರಾತ್ರಿಯ ಪ್ರಯಾಣವಾದ್ದರಿಂದ ಹೊರಗೆ ಏನೂ ಕಾಣುತ್ತಿರಲಿಲ್ಲ, ಮಲಗೆ ಸುಮ್ಮನೆ ಕೂತಿದ್ದ ಅಮ್ಮನ ನೋಡುತ್ತಾ ಇಡೀ ಹಾದಿ ಕಳೆಯಿತು.
ಬೆಳಗಿನ ಐದು ಗಂಟೆಗೆ ರೈಲು ಪಾಲಕ್ಕಾಡ್ ಸ್ಟೇಷನ್ ಮುಟ್ಟಿದಾಗ, ಚುಮು ಚುಮು ಚಳಿ; ಬಸ್ ಹಿಡಿದು ಅಜ್ಜನ ಮನೆ ತಲುಪುವಾಗ ಗಂಟೆ ಏಳಾಗಿದ್ದ ಕಾರಣ, ಎಲ್ಲರೂ ದೇವಸ್ತಾನಕ್ಕೆ ಹೋಗಿದ್ದರು, ಲಗುಬಗನೆ ಸ್ನಾನ ಮುಗಿಸಿ ಹೋದರೆ ಏನೋ ಅಪರಿಚಿತ ಭಾವ; ಕಳೆದ ಬಾರಿ ಬಂದಾಗ ನಾನು ಆಗಷ್ಟೆ ಹೈಸ್ಕೂಲ್ ಮುಗಿಸಿದ್ದೆ, ನಾನು ಓಡಿಯಾಡಿದ ನೆಲದಲ್ಲಿ ಮಾವಂದಿರ, ಅಣ್ಣಂದಿರ ಮಕ್ಕಳ ಕೇ ಕೇ.. ಯಾಕೋ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಅನಾಥ ಭಾವ; ಅಡ್ಜಸ್ಟ್ ಮಾಡೋಕೆ ಕೊಂಚ ಕಾಲ ಹಿಡಿದಿದ್ದರು ಆ ಖಾಲಿತನ ಹಾಗೇ ಉಳಿದಿತ್ತು. ಆಮೇಲಿನ ಕಾಲೇಜಿನ ಗಡಿಬಿಡಿಗಳಲ್ಲಿ ಈ ಕಡೆ ಬರಲು ಸಮಯ ಸಿಕ್ಕಿರಲಿಲ್ಲ, ಸಿಕ್ಕಿದರೂ ಮನಸಿಗೆ ಬೇಡ ಅನ್ನಿಸಿತ್ತು.. ಹಾಗೆ ಎಷ್ಟೋ ವರ್ಷಗಳ ಬಳಿಕ ಈಗ.
ಈಗಲೂ ಅದೇ ಹಿಂಜರಿಕೆಯಿಂದಲೇ ಸುಮ್ಮನೆ ನಿಂತಿದ್ದೆ, ಆದರೆ ಅದೇ ಹಳೆಯ ನಗೆಯೊಂದಿಗೆ, ಅಪ್ಪುಗೆಯಿಂದ ಉಸಿರುಗಟ್ಟಿಸಿ, ಕೇರಳಿಯರಿಗೇ ವಿಶಿಷ್ಟವಾದ 'ವೆಲಿಯ ಉಮ್ಮ' ಕೊಟ್ಟ ದೊಡ್ಡಮ್ಮ, ' ಮೋನು, ಹೇಗಿದ್ದಿಯ, ಅಂತ ಅಜ್ಜಿ, ' ಎಷ್ಟು ಉದ್ದ ಆಗಿದ್ದೀಯಾ! ದೇವರೇ, ನೀನು ಈ ಎರಡು ಕೈ ಮೇಲೆ ಮಲಗಿದ್ದು ನೆನಪಿದೆ' ಅಂತ ನಕ್ಕ ದೊಡ್ಡಪ್ಪ, ನನ್ನ ಆತಂಕವೆಲ್ಲ ಕರಗಿಸಿದರು.
ಅಮ್ಮನ ಅವರ ಜೊತೆ ಮಾತಾಡಲು ಬಿಟ್ಟು ಹೊರ ಬಂದು, ಜಾತ್ರೆಗೆ ತಯಾರಿ ನಡೆಯುತ್ತಿದ್ದದ್ದು ನೋಡುತ್ತಿದ್ದವನಿಗೆ, ದುಬೈಗೆ ಹಾರಿದ್ದ ಅಣ್ಣ ಈ ಸಲ ಸಿಗೊಲ್ಲ ಎಂದು ಹೊಳೆದು ಸ್ವಲ್ಪ ಬೇಜಾರಾಯ್ತು, ಎದುರಿನ ಕಂಪೌಂಡ್ ಗೋಡೆಯಲ್ಲಿ ಮೋಹನ್ ಲಾಲ್ ನ  ಯಾವುದೋ ಸಿನೆಮಾ ಪೋಸ್ಟರ್ ನಲ್ಲಿ ಕಂಡೆ; ಮತ್ತೆಲ್ಲ ಬದಲಾದರೂ  ಅವತ್ತಿನಂತೆ ಈಗಲೂ ಮೋಹನ್ ಲಾಲ್ ನಗುತ್ತಲೇ ಇದ್ದದ್ದು ನೋಡಿ, ಬಾಲ್ಯದ ಯಾವುದೋ ಕಳೆದ ಕೊಂಡಿ ಸಿಕ್ಕಂತಾಗಿ, ಖುಷಿಯಾಯಿತು.  .       

Tuesday, February 8, 2011

ಮುಖಾಮುಖಿ

ವಾರದ ರಜಾದಿನವಾದ್ದರಿಂದ, ಯಾವಾಗಲೂ ಹೋಗುವಂತೆ ಮನೆಗೆ ಹೋದೆ; ಮೊಬೈಲ್ ನಲ್ಲಿ ಚಾರ್ಜ್ ಕಮ್ಮಿ ಇದೆಯಲ್ವಾ, ಬೇಗ ಚಾರ್ಜ್ ಗೆ ಇಡಬೇಕು ಎಂಬ ಧಾವಂತದಲ್ಲಿ. ಅಂಗಳಕ್ಕೆ ಕಾಲಿಡುವಾಗಲೇ ತನ್ನ ಮುದ್ದಿನ ಹೂ ಗಿಡಗಳಿಗೆ ನೀರು ಹನಿಸುತ್ತಿದ್ದ ಅಮ್ಮ, " ಮೋನು, ವಿಷ್ಯ ಗೊತ್ತಾ? ಕರೆಂಟ್ ಇಲ್ಲ.. ಕೆಳಗಿನ ಮನೆ ಹತ್ರ ಕಂಬ ಮುರಿದು ಬಿದ್ದಿದೆಯಂತೆ" ಅಂದರು. ತಕ್ಷಣ ಅಸಾಧ್ಯ ಸಿಟ್ಟು ಬಂತು, ಮೈ ಪರಚಿಕೊಳ್ಳುವಷ್ಟು; " ಏನಮ್ಮಾ, ಮೊದಲೇ ಹೇಳೊದಲ್ವಾ? ಈಗ ನೋಡು, ಮೊಬೈಲಿನಲ್ಲಿ ಚಾರ್ಜ್ ಕೂಡಾ ಇಲ್ಲ..." ಎಂದು ರೇಗಿದೆ. " ನಿನ್ನದೊಂದು ಮೊಬೈಲ್, ನನ್ನ  ಸೀರಿಯಲ್ ನೋಡದೆ ದಿನ ಎರಡಾಯ್ತು’ ಎಂದರು ಅಮ್ಮ. ಸಿಡಿಮಿಡಿಯಿಂದಲೇ ಮನೆಯೊಳಗೆ ಬಂದು, ಬ್ಯಾಗನ್ನತ್ತ ಬಿಸಾಕಿದೆ.
  ’ಛೇ!’ ಎನ್ನುತ್ತಾ ಮೊಬೈಲ್ ತೆಗೆಯುತ್ತಿದ್ದಂತೆ ಬ್ಯಾಟರಿ ಮುಗಿದು ಅದು ಆಫ಼್ ಆಗಿತ್ತು; ಒಂದೇ ಕ್ಷಣಕ್ಕೆ ಮೂಡ್ ಗಾಳಿ ಹೋದ ಬಲೂನ್ ನಂತೆ, ಸೋರಿ ಹೋಯ್ತು. " ದೇವರೇ! ಮೆಸೇಜುಗಳಿಗೆ ರಿಪ್ಲ್ಯೈ ಕೊಡ್ಲಿಲ್ಲ, ಅವಳಿಗೆ ಕಾಲ್ ಮಾಡ್ಲಿಲ್ಲ, ಫ಼ೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡ್ಲಿಲ್ಲ, ಎಲ್ಲಕ್ಕಿಂತ ಮುಖ್ಯ ಆವಾಗಾವಾಗ ಕೇಳಲು ಹಾಡುಗಳಿಲ್ಲ" ಜಗತ್ತು ಒಂದೇ ನಿಮಿಷಕ್ಕೆ ಕತ್ತಲಾದಂತೆ ಅನಿಸಿತು! ಸುಮ್ಮನೆ ಮೊಬೈಲ್ ಸ್ಕ್ರೀನ್ ನೋಡುತ್ತಾ ಕುಳಿತೆ.
 ಅಷ್ಟರಲ್ಲಿ ಅಮ್ಮ ಚಹಾ ತಂದರು, " ಎಂಥಾದ್ದೋ? ಸಪ್ಪಗಿದ್ದೀಯಾ; ಮೊಬೈಲ್ ಆಫ಼ಾ? ಒಳ್ಳೇದಾಯ್ತು ಬಿಡು, ಇಪ್ಪತ್ತನಾಲ್ಕು ಗಂಟೆನೂ ಅದರಲ್ಲೇ ಗುರುಟಿಗೊಂಡಿರ್ತಿಯ, ಮೊದಲೆಲ್ಲಾ ಏನು ಅದಿಲ್ದೆ ಬದುಕ್ತಾ ಇರಲಿಲ್ವ?" ಅಂತ ಹೇಳುತ್ತಿರುವಾಗಲೇ, ಕಿರಿಕಿರಿಯಾಗಿ ಗದರುವಂತಾದರೂ "ಹೌದಲ್ವಾ!" ಅನಿಸಿತು. " ಹಾಗಲ್ಲಮ್ಮ, ಓದೋಣ ಅಂದ್ರೆ ಪುಸ್ತಕಾನೂ ತಂದಿಲ್ಲ, ಟಿ.ವಿ.ನೂ ಇಲ್ಲ. ಪೇಟೆಗೆ ಹೋಗ್ಲಿಕ್ಕೆ ಉದಾಸೀನ, ಒಂಥರಾ ಬಾವಿಗೆ ಬಿದ್ದ ಹಾಗೆ..." ಅಂದೆ. " ಪೇಟೆನೂ ಬೇಡ, ಏನೂ ಬೇಡ, ಎರಡು ದಿನ ನೆಮ್ಮದಿಯಾಗಿರು, ಹೋಗಿ ಕೈ ಕಾಲು ತೊಳಕೊಂಡು ಬಾ, ತಿಂಡಿ ತಿನ್ನುವಿಯಂತೆ" ಅಂದು ಅಮ್ಮ ಒಳಗೆ ಹೋದರು. ಸುಮ್ಮನೆ ಪಾಲಿಸಿದೆ.
   ಬಚ್ಚಲು ಮನೆಗೆ ಹೋಗಿ ಮುಖಕ್ಕೆ ನೀರೆರಚಿಕೊಂಡು ಬಂದಾಗ ಕೆಸರಿನಂತಾಗಿದ್ದ ಮನಸ್ಸು ಸಮಸ್ಥಿತಿಗೆ ಬರತೊಡಗಿತ್ತು; ತಿಂಡಿ ಹೊಟ್ಟೆಗೆ ಬಿದ್ದ ಮೇಲಂತೂ ತಲೆ ಸಂಪೂರ್ಣ ಸರಿಯಾಗಿ, ತಂಗಿ ಯಾವಾಗಲೂ ಹೇಳುತ್ತಿದ್ದಂತೆ, " ಇವಂದು ಯಾವಾಗ್ಲೂ ಅತೀನೇ..."  ಏನೇನೋ ಯೋಚನೆ ಬರತೊಡಗಿತು; " ಯಾವುದು ಇಲ್ಲಿ ಶಾಶ್ವತ? ಹೀಗೇ ಬದುಕಿ ಬಿಡಬೇಕು, ಬದುಕು ಎಷ್ಟು ದಿನ? ಈಗಿದ್ದವರು ಈಗ ಇಲ್ಲ.. ಇತ್ಯಾದಿ ಇತ್ಯಾದಿ" ಸುಮ್ಮನೆ ಈಸಿಚೇರ್ ನಲ್ಲಿ ಕಾಲು ಚಾಚಿ ಮಲಗಿದೆ, ಏನೋ ಬ್ಲಾಂಕ್ ನೆಸ್; ಈಗ ಅವಳು ಪೋನ್ ಮಾಡಿರಬಹುದೇ? ಮೊಬೈಲ್ ಆಫ಼್ ಅಂತಾ ಗಾಬರಿಯಾಗಿರಬಹುದೇ? ಆಸರೆಗೆ ಇವನು ಪ್ರಯೋಜವಿಲ್ಲ ಅಂತ ಇನ್ನೊಬ್ಬ ಗೆಳೆಯನ ಜೊತೆ ಹೋಗಿರಬಹುದೇ? ಕಂಪೆನಿಯವರು ಫ಼ೋನ್ ಮಾಡಿರಬಹುದೇ? ಹಾಳು ಲ್ಯಾಂಡ್ ಲೈನ್ ಕೂಡಾ ಇಲ್ಲ,ಮೊಬೈಲ್ ಇರೋವಾಗ ಸುಮ್ನೇ ಅದ್ಯಾಕೆ? ದುಡ್ಡು ಜಾಸ್ತಿ ಆಗಿದ್ಯಾ ಅಂತ ಅಮ್ಮನ ವರಾತ; ಫ಼ೇಸ್ ಬುಕ್ ನಲ್ಲಿ ಯಾರಾದ್ರೂ ಚಾಟ್ ಗೆ ಕಾಯ್ತಾ ಇರಬಹುದಾ? ಇವರೆಲ್ಲಾ ನನ್ನ ಮರೆತು ಹೋಗ್ತಾರಾ? ಅಂತ ಭಯ! ಯಾವಾಗ ನಿದ್ದೆ ಬಂತು ತಿಳಿಯಲೇ ಇಲ್ಲ.
   " ಊಟ ಮಾಡು ಬಾರೋ" ಅಂತ ಅಮ್ಮ ಕರೆದಾಗ, ಒಂದು ಕ್ಷಣ ಎಲ್ಲಿದ್ದೇನೆ ಅಂತಾನೇ ಗೊತ್ತಾಗ್ಲಿಲ್ಲ! ಕಣ್ಣು ಹೊಸಕಿಕೊಳ್ಳುತ್ತಾ ಎದ್ದು ಊಟ ಮುಗಿಸಿ ಪುನಹ ಅಡ್ಡಾದವನಿಗೆ, ನಿದ್ದೆ ಹತ್ತಲಿಲ್ಲ; ಅತ್ತ-ಇತ್ತ ಹಾಸಿಗೆಯಲ್ಲಿ ಹೊರಳಾಡುತ್ತಾ, ಗಂಟೆ ಹನ್ನೆರಾಡಯ್ತು, ಅಮ್ಮನಿಗೆ ಎಚ್ಚರವಾಗದಂತೆ ಎದ್ದು, ಮೂತ್ರಕ್ಕೆ ಅಂತ ಹೊರಗೆ ಬಂದೆ; ಯಾವುದೋ ಪರಧ್ಯಾನದಲ್ಲಿ ಕೆಲಸ ಮುಗಿಸಿ, ಯಾಕೋ ಸುಮ್ಮನೆ ತಲೆಯೆತ್ತಿ ನೋಡಿದೆ, ಆಕಾಶದ ತುಂಬಾ ನಕ್ಷತ್ರಗಳು! ಒಂದೇ ಒಂದು ಮೋಡದ ತುಣುಕೂ ಇಲ್ಲ! ಚಿಕ್ಕವನಿದ್ದಾಗ, "ಅದು ಸಪ್ತರ್ಷಿ ಮಂಡಲ, ಇದು ಬೇಟೆಗಾರ, ಅಗೋ ಅದು ಅವನ ನಾಯಿ " ಅಂತೆಲ್ಲಾ, ಮನೆ ಬಿಟ್ಟು ಓಡಿ ಹೋಗಿ ,ಈಗ ನೆನಪಾಗಿರುವ ಅಣ್ಣ ತೋರಿಸುತ್ತಿದ್ದುದು ನೆನಪಾಯಿತು! ಅವನ ಬಗ್ಗೆ ಅವಳ ಬಳಿ ಹೇಳೋವಾಗೆಲ್ಲಾ, "ಏನು ಬೋರು ಹೊಡೆಸ್ತಿಯಾ, ದೇವರೇ!" ಅನ್ನೋ ಅವಳ ಕಮೆಂಟು ಕೂಡ; ಮನಸಿಗೆ ಒಂಥರಾ ವಿಷಾದ ಭಾವ; ಹಠಾತ್ತಾಗಿ ನಾನು ಕೊನೆಯ ಬಾರಿ ಆಕಾಶ ನೋಡಿದ್ದು ಯಾವಾಗ? ಎಂಬ ಪ್ರಶ್ನೆ ಮೂಡಿತು! ಅದು ನೆನಪಾಗದೆ, " ಛೇ!, ನಾನು ಎಷ್ಟೊಂದು ಮಿಸ್ ಮಾಡ್ಕೋತಾ ಇದೀನಲ್ಲಾ" ಅನ್ನಿಸಿ, ತುಂಬಾ ಬೇಜಾರಾಯ್ತು. ಹಾಗೆಯೇ ಮನೆಯ ಮೆಟ್ಟಿಲ ಮೇಲೆ ಕುಳಿತು ಆಕಾಶ ನೋಡುತ್ತಾ ಕುಳಿತವನಿಗೆ ಎಷ್ಟು ಖುಷಿಯಾಯ್ತೂ ಎಂದರೆ, ವಾಪಾಸ್ ರೂಮಿಗೆ ಹೋಗೋದು ಮರೆತು ತುಂಬಾ ಹೊತ್ತು ಅಲ್ಲೇ ಕೂತಿದ್ದೆ, ಆಕಾಶ ನೋಡಿಕೊಂಡು!
 ಮರುದಿನ ಬೆಳಿಗ್ಗೆ, ಕೆಲಸ ಎಲ್ಲಾ ಮುಗಿಸಿ, ಸುಮ್ಮನೆ ಕೂತವನಿಗೆ, ಯಾರೂ ಒಬ್ಬರಿಗೊಬ್ಬರಿಗೆ ಕನೆಕ್ಟ್ ಆಗದ ಈ ಅನಿವಾರ್ಯತೆಯಲ್ಲೂ ಎಂಥಹ ಸುಖ ಇದೆ ಅಂತಾ ಫ಼ೀಲ್ ಆಗತೊಡಗಿತು. ಯಾರಿಗೂ ಏನು ಮಾಡ್ತಾ ಇದ್ದೇನೆ ಅಂತ ಹೇಳಬೇಕಿಲ್ಲ; ಮೆಸೇಜುಗಳಿಗೆ ಉತ್ತರಿಸಬೇಕಿಲ್ಲ; ಇಲ್ಲದ ಮೂಡನ್ನು ತಂದು ನಗಬೇಕಿಲ್ಲ; ನನ್ನ ಪಾಡಿಗೆ ನಾನು! ಅವತ್ತು ಸಂಜೆ ಮನೆಯಿಂದ ಹೊರಟಾಗಿನ ’ನಾನು", ಬಂದಾಗಿನ ’ನಾನು’ ಆಗಿರಲಿಲ್ಲ!
 ವಾಪಾಸು ಅದೇ ಧೂಳು, ವಾಹನಗಳು, ಟ್ರಾಫ಼ಿಕ್ ನಲ್ಲೆಲ್ಲಾ ಏಗಿ, ರೂಮಿಗೆ ಬಂದು ನೊಬೈಲ್ ಚಾರ್ಜ್ ಗಿಟ್ಟು ಸ್ವಿಚ್ ಆನ್ ಮಾಡಿದರೆ, ಮೆಸೇಜುಗಳ ಮಳೆ! ಅವಳದ್ದು, ಗೆಳೆಯರದ್ದು. ಒಬ್ಬನೂ ’ಎಲ್ಲಿದ್ದಿಯಾ?’ ಅಂತ ತಪ್ಪಿಯೂ ಕೇಳಿರಲಿಲ್ಲ. ಈ ಜಗತ್ತು ನಾನಿಲ್ಲದಿದ್ದರೂ ಚೆನ್ನಾಗೇ ನಡೆಯುತ್ತಲ್ವಾ? ಅಂತ ತೀವ್ರವಾಗಿ ಅನ್ನಿಸಿತು.
 ಅಷ್ಟರಲ್ಲಿ ಅವಳ ಕಾಲ್, "ಎಲ್ಲಿ ಹೋಗಿದ್ದೆ? ಎಷ್ಟು ಸಲ ಫ಼ೋನ್ ಮಾಡೋದು? ಹೇಳೋಕಾಗಲ್ವಾ ನಿಂಗೆ?" ಅಂತ ಸಾವಿರ ಪ್ರಶ್ನೆಗಳು; " ಊರಿಗೆ ಹೋಗಿದ್ದೆ. ಪವರ್ ಇರ್ಲಿಲ್ಲ ಮನೇಲಿ, ಹಾಗೆ ಫ಼ೋನ್ ಸ್ವಿಚ್ ಆಫ಼್ ಆಗಿತ್ತು..ಸಾರಿ" ಅಂದೆ. " ಪ್ರೀತಿ ಇದ್ದಿದ್ರೆ, ಹೇಗಾದ್ರೂ ಕಾಂಟ್ಯಾಕ್ಟ್ ಮಾಡ್ತಾ ಇದ್ದೆ.. ಗೋ ಟು ಹೆಲ್" ಅಂದು ಕಾಲ್ ಕಟ್ ಮಾಡಿದಳು. " ಪ್ರೀತಿ ಇದ್ದಿದ್ದರೆ ನೀನು ಅರ್ಥ ಮಾಡ್ಕೋತ ಇದ್ದೆ... " ಅಂತ ಮೆಸೇಜು ಕಳಿಸಿ, ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟು , ಎಂದಿನಂತೆ ಟಿ.ವಿ. ಆನ್ ಮಾಡದೆ ಸುಮ್ಮನೆ ಕುಳಿತೆ. ರೂಮಿನ ಕಿಟಕಿಯ ಹೊರಗೆ, ಸಂಜೆಯ ಸೂರ್ಯನ ಕಿರಣ ಮರದ ಎಲೆಯ ಮೇಲೆ ಬಿದ್ದಿರೋದು, ಮೊದಲ ಬಾರಿಗೆಂಬಂತೆ ಕಂಡು  ಆಶ್ಚಯವಾಯಿತು!!      

Monday, January 17, 2011

ಮೊಗೆದಷ್ಟೂ ನೆನಪುಗಳು...


ಎಲ್ಲವೂ ಬದಲಾಗುತ್ತದೆ, ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲಿ, ಮನೆಯಲ್ಲಿ ನನಗೊಂದು ನನ್ನದೇ ಕೋಣೆಯಿತ್ತು; ಮಂಚವಿದ್ದ ಆ ಕೋಣೆಯನ್ನು ತಂಗಿಯ ಜೊತೆ ಜಗಳವಾಡಿ, ನಾ ಹೆಚ್ಚು ಅಂತ ತೋರಿಸಲು ತೆಗೆದುಕೊಂಡ ನಂತರ, ಎಲ್ಲೋ ಏನೋ ಕುಟುಕಿದರೂ, ಆಗೆಲ್ಲಾ ಅದು ಅಂಥದ್ದೇನೂ ಅನ್ನಿಸೋ ವಯಸ್ಸಾಗಿರಲಿಲ್ಲ. ಶಾಲೆಗೆ ರಜೆ ಇದ್ದ ದಿನಗಳಲ್ಲಿ, ಆ ಮಂಚದಲ್ಲಿ ಮಲಗಿ,ಮನೆಯ ಹಿಂದಿದ್ದ ಹಟ್ಟಿಯನ್ನು ನೋಡುತ್ತಾ, ಹಾಗೆ ಬಿದ್ದುಕೊಳ್ಳೋದು ಎಂಥಾ ಪರಮ ಸುಖ ಅಂಥ ಕಲ್ಪಿಸಿಕೊಳ್ಳುತ್ತಲಿದ್ದೆ! ಶಾಲೆಗೆ ಹೋಗೋವಾಗ ನಡೆಯುವ ದಾರಿಯ ಬೇಸರ ಕಳೆಯಲು ಪುಸ್ತಕ ಓದುತ್ತಾ ಹೋಗಿ ಎಡವಿ ಬಿದ್ದು, ಗಾಯ ಮಾಡಿಕೊಂಡು, ಅಮ್ಮನ ಬಳಿ ಸುಳ್ಳು ಹೇಳಿ, ’ಸಿ.ಐ.ಡಿ. ಅಮ್ಮ’ನ ಬಳಿ ಬೈಯಿಸಿಕೊಂಡದ್ದು ನೆನಪಿದೆ. ಆಗೆಲ್ಲಾ ಮುಂದೆ ದೊಡ್ಡವನಾದಾಗ, ಈ ದಾರಿಯಲ್ಲಿ ಸುಮ್ಮನೆ ನಡೆಯುತ್ತಾ ಬರೆಯಬೇಕು, ಹಳೆಯ ಕಿತಾಪತಿಗಳನ್ನೆಲ್ಲಾ ನೆನೆಸಿ ನಗಬೇಕು ಅಂಥೆಲ್ಲ ಕನಸು ಕಂಡಿದ್ದೆ; ಈಗ ದಾರಿ ಹಾಗೇ ಇದೆ, ಆದರೆ ಅದರಲ್ಲಿ ಖುಶಿಯಲ್ಲಿ ನಡೆಯುತ್ತಿದ್ದ ಆ ’ನಾನು’ ಎಲ್ಲೋ ಕಾಣೆಯಾಗಿದ್ದಾನೆ! ಅಮ್ಮ ಸುಟ್ಟ ಗೇರುಬೀಜದಲ್ಲಿನ ಸೋನೆಯ , ಈಗಿನ ಪ್ಯಾಕ್ಡ್ ಬೀಜಗಳಲ್ಲಿ ಹುಡುಕಿ ಸೋತಾಗ ಇದೆಲ್ಲ ನೆನಪಾಗುತ್ತದೆ.
ಆ ದಿನಗಳು ಚಂದವಿತ್ತು ಎಂದು ಈಗ ಆರಾಮವಾಗಿ ಹೇಳಿಬಿಡಬಹುದು, ಆದರೆ ಮಂಗಳೂರಿನಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ, ಸಂಜೆ ೭ ರ ಸಿನೆಮಾಗೆ, ೨ ನೇ ಕ್ಲಾಸಿನ ಟಿಕೆಟ್ ತೆಗೆದುಕೊಂಡು, ಸಿನೆಮಾ ನೋಡಿ ರೂಮಿಗೆ ವಾಪಾಸ್ ಬರಲು ಬಸ್ ಇಲ್ಲದೆ, ಗೆಳೆಯರೊಂದಿಗೆ ಸ್ಟೇಟ್ ಬ್ಯಾಂಕ್ ನಿಂದ ನಡೆದು ಬರುವ ಸುಖದ ಗಳಿಗೆಗಳಲ್ಲೂ, ’ಹೀಗಾದರೆ ಮುಂದೇನು ಗತಿ?’ ಎಂಬ ಆತಂಕದ ಒತ್ತಡವೂ ಇತ್ತು; ಮುಂದೇನು? ಮುಂದೇನು? ಎಂಬ ಚಿಂತೆಯಿಂದ ನಾನು ಪೂರ್ತಿಯ್ಯಾಗಿ ಅನುಭವಿಸಲಾಗದ ,ಕಳೆದ ಖುಶಿಯ ಕ್ಷಣಗಳ ನೆನೆದು, ಬೇಜಾರಾಗುತ್ತದೆ. ಕಂಪನಿ ಸಿಗಲಿಲ್ಲ ಅಂಥ ಯಾರೋ ಗೆಳೆಯನನ್ನು ಕರೆದುಕೊಂಡು ’ರಜನೀಕಾಂತ್’ ಸಿನೆಮಾಕ್ಕೆ ಫ಼ಸ್ಟ್ ಶೋ ಗೆ ಹೋಗಿ, ಅವನು ಮುಖ ಕಿವಿಚಿದಾಗೆಲ್ಲಾ ನಾನು ಕಿವಿಚಿ, ಅವನು ಚೆನ್ನಾಗಿಲ್ಲಾ ಅಂತ ಬೈಯ್ದಾಗ ’ಅಲ್ಲ’ ಅಂತ ಅನಿಸಿದರೂ ಹೇಳಲಾರದೆ , ಹೌದು ಅಂತ ತಲೆಯಾಡಿಸಿದ್ದು,ಗೆಳೆಯರು ಯಾರೂ ಬಓದಿಲ್ಲ ಅಂದಾಗ, ಭಂಡ ಧೈರ್ಯದಲ್ಲಿ , ಒಬ್ಬನೇ ಸಿನೆಮಾಕ್ಕೆ ಹೋಗಿ , ಥಿಯೇಟರ್ ನ ಕತ್ತಲಲ್ಲಿ, ’ನನ್ನನ್ನು ಬಿಟ್ಟು ಈ ಜಗತ್ತಲ್ಲಿ ಎಲ್ಲರೂ ಸುಖವಾಗಿದ್ದಾರೆ’ ಎಂಬ ಅನಾಥ ಪ್ರಜ್ನೆ ಕಾಡಿದ್ದು ಎಲ್ಲಾ ನೆನಪಿದೆ.
 ಈಗೆಲ್ಲಾ ಅದನ್ನು ಯೋಚಿಸಿದಾಗ , ಮತ್ತೆ ಹಾಗೆಲ್ಲಾ ಮಾಡಲು ಸಾಧ್ಯವೇ ಎನಿಸುತ್ತದೆ; ಮೊದಲೆಲ್ಲ ನಡೆಯುವುದೆಂದರೆ, ಏನೋ ಖುಶಿ, ಕಣ್ಣ ತುಂಬ ಕನಸುಗಳು, ಜೇಬಿನಲ್ಲಿಷ್ಟು ಕಡಲೆ ಮತ್ತು ನನ್ನೊಳಗೆ ಮುಗಿಯದ ಯೋಚನೆಗಳು; ಈಗ ಉದಾಸೀನ ಮತ್ತು ಬರೇ ಅಸಹನೆ!! ಹಾಗೆಯೇ ಬಸ್ ಹತ್ತಿದ ಕೂಡಲೆ ಅವರಿವರ ಮುಖ ನೋಡುತ್ತಾ ಇವರ ಬದುಕು ಹೀಗಿರಬಹುದೇ, ಇವರಿಗೂ ಪ್ರೀತಿ ಹುಟ್ಟಿರಬಹುದೆ, ಏನು ಓಡುತ್ತಿರಬಹುದು ಈಗ ಇವರ ಮನದಲ್ಲಿ ಅಂಥೆಲ್ಲಾ ಯೋಚಿಸುತ್ತಿರಬೇಕಾದರೆ ಸ್ಟಾಪ್ ಬಂದದ್ದೇ ತಿಳಿಯುತ್ತಿರಲಿಲ್ಲ, ಆದರೆ ಈಗ ಬಸ್ ಹತ್ತಿದೊಡನೆ ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು , ಕಣ್ಣು ಮುಚ್ಚಿದರೆ, ಬಸ್ ಹಳ್ಳ - ಕೊಳ್ಳಗಳಲ್ಲಿ ’ದಡ-ಬಡ’ ಅನ್ನುತ್ತಾ ಹೋಗೋವಾಗ, ಥೇಟು ಜೋಕಾಲಿ ಜೀಕಿದಂತೆ ಜೋರು ನಿದ್ದೆಯ ಅಮಲು! ಎಲ್ಲೋ ಸ್ವರ್ಗದ ಬಾಗಿಲು ತಟ್ಟುವ ಗಳಿಗೆಯಲ್ಲಿ ಬರುವ ಸ್ಟಾಪ್!
ಅದರಂತೆ ಹೀಗೆ ಮಿಸ್ಡ್ ಕಾಲ್ ಗಳಲ್ಲಿ ಪರಿಚವಾದ ಹುಡುಗಿಯ ಬಗ್ಗೆ ವೃಥಾ ಅನುಮಾನ! ಅವಳ ಜಾತಿ, ಬಣ್ಣ, ಅರ್ಹತೆ, ವಯಸ್ಸು ಗಳ ತುಲನೆ; ಸುಮ್ ಸುಮ್ನೆ  ಕೀಳರಿಮೆ; ಅವಳ ಹಳೆಯ ಗೆಳೆಯರ ಬಗೆಗೆ ತೀರದ ಕೋಪ; ಆದರೆ ಇಂಥಹ ಅಧಿಕ ಪ್ರಸಂಗಳಿಲ್ಲದ್ದಿದ್ದರೆ ಬದುಕು ನೀರಸ ಅನ್ನೋದೂ ಅಷ್ಟೇ ಸತ್ಯ!!
  ಇದೆಲ್ಲದರ ಮಧ್ಯೆ ಇತ್ತೀಚೆಗೆ ನಮ್ಮ ಜೊತೆ ಓಡಾಡಿಕೊಂಡು , ಚೆನ್ನಾಗಿದ್ದ ಗೆಳೆಯನೊಬ್ಬ ಮದುವೆಯ್ಯಾದ; ಇವನ ಕಡು ಮೌನಕ್ಕೂ, ಅವಳ ’ ಚಾಟರ್ ಬಾಕ್ಸ್’ ನಂತ ವ್ಯಕ್ತಿತ್ವಕ್ಕೂ ಅಸಲು ಹೊಂದಿಕೆಯೇ ಇಲ್ಲ! ’ಹೇಗಪ್ಪಾ ಬದುಕ್ತಾನೆ? ಸದ್ಯವೇ ಇವನು ಬಾರ್ ನಲ್ಲಿ ಸಿಗ್ತಾನೆ’ ಅಂಥ ಕಳವಳ ಪಡುತ್ತಿರಬೇಕಾದರೆ, ಮೊನ್ನೆ ರೋಡ್ ನಲ್ಲಿ ಅವರಿಬ್ಬರು ಒಬ್ಬರ ಕೈ ಇನ್ನೊಬ್ಬರು ಹಿಡ್ಕೊಂಡು ಖುಷಿಯಿಂದ ನಡೆದುಕೊಂಡು ಹೋಗ್ತಿರೋದು ನೋಡಿ , ಮನದಲ್ಲಿನ ನವಿಲು ರೆಕ್ಕೆ ಬಿಚ್ಚಿ ಕುಣಿದ ಹಾಗಾಯ್ತು!
ಅಂದ ಹಾಗೆ , ಖುಷಿಪಡಲು ಕಾರಣ ಬೇಕೇ?